ನಾ ಗಾರ್ಮೆಂಟ ಕೂಲಿ ಮಾಡಾಕಿ…‌‌‌

ಹೊತ್ತಿಗೆ ಮುಂಚೆ
ಕಾಲ್ಚೆಂಡು ಪುಟದಾಂಗ
ಪುಟಿಬೇಕ್ರಿ
ಮನಿ ಕಸ ಮುಸುರೆ
ಹೇಗಾದ್ರೂ
ಮುಗಿದೋಗಬಿಡಬೇಕ್ರಿ
ಯಾಕಂತೀರಾ?
ನಾ ಗಾರ್ಮೆಂಟನಾಗೆ
ಕೆಲಸ ಮಾಡಾಕಿ.

ಸೈರನ್ ಗಂಟಿ
ಕಿವಿ ಹಿಂಡತಾವ್
ಒಂದೈದು ನಿಮಿಷ
ಎಂಟ್ರಿ ತಡಾತಂದ್ರ
ರಜೆ ಕಟ್ರಿ
ಇಲ್ಲಾಕಂದ್ರ
ಸಂಬಳ ಕಟ್ರಿ.

ವಷ೯ಕ್ಕೊಂದೆರಡ
ರಜಾ ಬಿಟ್ರ
ಶನಿವಾರ ಇಲ್ರಿ
ಬಾನುವಾರ ರಜೆ
ಮೊದಲೆ ಇಲ್ಲ್ ಬಿಡ್ರಿ
ಹಬ್ಬ ಹುಣ್ಣಿಮೆ
ಕೇಳಾ ಬ್ಯಾಡ್ರಿ.

ಮಕ್ಕೊಂಡ ಶಿಶು
ರಚ್ಚಿ ಹಿಡದೈತ್ರಿ
ಸೋರಾಕತ್ತಾವ್ ಎದಿ ಹಾಲ್
ಏಯ್ ಮುಚ್ಕಂಡ ಕೆಲಸ
ಮಾಡಂದಾನವನು
ಪುಕ್ಕಟ್ ಸಂಬಳ
ಕೊಡಲೇನ್ ನಿನಗ.

ಮಾತಾಡಾಂಗಿಲ್ಲರೀ
ನಾವ್ ಹೊಟ್ಟೆ ಪಾಡಿಗ್
ಸೇರ್ಕಂಡಿವ್ರೀ
ಇಲ್ಲಿ ಸಾಲಿ ಬರೆ
ಹತ್ತನೆ ಕ್ಲಾಸ್ ಸಾಕ್ರೀ
ಬಟ್ಟಿ ಹೊಲಿಯಾಕ್
ಬರಬೇಕ ನೋಡ್ರಿ.

ಪಿ.ಎಫ್ ಸೌಲತ್ ಐತ್ರಿ
ಇ.ಎಸ್.ಐ.ಸೌಲತ್ ಐತ್ರಿ
ರೊಕ್ಕ ಎಣಿಸೊ
ಮಂದಿ ಈಗ
ಹೊಸಾ ಕಾನೂನ
ತಂದಾರ್ರಿ
ಗಲಾಟೆ ಮಾಡಿ
ಬೆಂಕಿ ಹಚ್ಚಾತ್ರಿ
ಆದ್ರ
ನನ್ನೊಟ್ಟೆ ಉರಿತೈತ್ರಿ
ಒಂದಿನ ಸಂಬಳ
ಕಟ್ಟಾಯ್ತಲ್ರಿ.

ಎಂಟರ ಬೆಳಗಿ
ಹಾಜರಾಗ ಬೇಕ್ರಿ
ಓಟಿ ಆಸಿ ತೋರ್ಸಿ ನಮಗ
ಗಂಟಿ ಹತ್ತಾದ್ರೂ
ಗಂಡು ಕೂಸಾದ್ರೆ
ಬಿಡಾಂಗಿಲ್ರಿ
ನೈಟ್ ಶಿಫ್ಟು
ಮಾಡಂತಾರ್ರಿ.

ಹೆಣ್ಮಕ್ಕಳ ಗೋಳು
ಒಸಿ ತ್ರಾಸ ಐತ್ರಿ
ಕಣ್ಣಿನ ದೃಷ್ಟಿ
ಆಗಾಗ ಕಾಡತೈತ್ರಿ
ಹರೆದ ಹೆಣ್ಮಕ್ಕಳೆ
ಬಾಳ ಅದಾರ್ರಿ
ಆದ್ರ್ ಏನೂ
ಮಾಡಾಕಾಗೂದಿಲ್ರಿ.

ಒಂದಾ ಎರಡಾ
ಇಲ್ಲಿ ಗೋಳು
ಸಂಬಳದ ಅಂಕಿ
ಏರೋದಿಲ್ರಿ
ಆರ್ಡರ್ ಟಾರ್ಗೆಟ್
ಇತ್ತಂದರಿ
ನಮ್ಮ ರಟ್ಟಿ
ಹೈರಾಣಾಗಾದು
ಗ್ಯಾರಂಟ್ರಿ.

ಏನ್ಮಾಡಾದು
ನಾನು ಗಾರ್ಮೆಂಟ
ಕೂಲಿ ಮಾಡಾಕಿ.
20-4-2016. 8.23 pm
(Published in Avadhi. mag.
Thanks avadhi)

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮ ಟಿಪ್ಪಣಿ ಬರೆಯಿರಿ