ಬೋಲೊ ಭಾರತ್ ಮಾತಾಕಿ….

“ಜೈ ಹಿಂದ್”

ಆಗಿನ ಪ್ರಧಾನಿ ದಿ|| ಇಂದಿರಾ ಗಾಂಧಿಯವರು ಆಗಸ್ಟ 15ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನು ಕುರಿತು ಮಾಡಿದ ಭಾಷಣ ಆಕಾಶವಾಣಿ ವಿವಿಧ ಭಾರತಿಯಲ್ಲಿ ಭಿತ್ತರವಾಗುತ್ತಿತ್ತು. ಅದು ಟೀವಿ ಇಲ್ಲದ ಕಾಲ. ಅವರ ಜೈ ಜೈ ಕಾರದ ಘೋಷ, ಆ ಧ್ವನಿ ಕಿವಿಯಲ್ಲಿನ್ನೂ ಮೊಳಗುತ್ತಿದೆ. ಆ ಒಂದು ಕಂಠದ ಗತ್ತು ಮತ್ಯಾರ ಧ್ವನಿಯಲ್ಲಿ ಕೇಳಲು ಸಾಧ್ಯ?

ಸ್ವಾತಂತ್ರ್ಯ ದಿನಾಚರಣೆ ಅಂದರೆ ಹಾಗೆ ಕೆಂಪು ಕೋಟೆ ಏನು ಹಳ್ಳಿ ಹಳ್ಳಿಗಳಲ್ಲಿ ಹಬ್ಬದ ವಾತಾವರಣ. ನಮ್ಮ ಹಳ್ಳಿ ಹಾಗೂ ಸುತ್ತಮುತ್ತ ಸ್ವಾತಂತ್ರ್ಯದ ಕಿಚ್ಚು ಕಂಡ ಅನೇಕ ವಯಸ್ಸಾದ ಹಿರಿಯರು ಇದ್ದರು ಇಂದಿರಾ ಗಾಂಧಿ ಕಾಲದಲ್ಲಿ.

ನಾನಿನ್ನೂ ಚಿಕ್ಕವಳು. ಹಳ್ಳಿಯ ಸರ್ಕಾರಿ ಪುಟ್ಟ ಶಾಲೆಯಲ್ಲಿ ಸ್ವಾತಂತ್ರ ದಿನೋತ್ಸವದ ಸಂಭ್ರಮ ವರ್ಣನಾತೀತ. ನಾಲ್ಕಾರು ದಿನಗಳಿಂದಲೆ ಈ ದಿನಕ್ಕಾಗಿ ಎಷ್ಟೊಂದು ತಯಾರಿ!

ಮಲೆನಾಡಿನಲ್ಲಿ ಮಳೆಗಾಲ ಬಂತೆಂದರೆ ತರಾವರಿ ಹೂವುಗಳನ್ನು ಬೆಳೆಯುವುದು ಎಲ್ಲರ ಮನೆಯ ಹೆಂಗಳೆಯರ ಪೈಪೋಟಿ. ಯಾರ ಮನೆಯಲ್ಲೇ ನೋಡಲಿ ಹಿತ್ಲಾಕಡೆ(ಮನೆಹಿಂದೆ) ಮನೆ ಮುಂದೆ ಅಂಗಳದಲ್ಲಿ ಡೇರೆ ಹೂವು ಸೇವಂತಿಗೆ ಹೂವುಗಳು ಈ ಸ್ವಾತಂತ್ರದ ಹಬ್ಬಕ್ಕೆ ನಳನಳಿಸುತ್ತಿರುತ್ತವೆ. ಶ್ರಾವಣದಲ್ಲಿ ಬರುವ ಹಬ್ಬಕ್ಕೆ ಬೇಕೆಂದು ಮೊದಲೇ ಹೂ ಬೆಳೆಯುವ ಪೂರ್ವ ತಯಾರಿ ಕೂಡಾ ಹೌದು.

ಆಗೆಲ್ಲ ಶಾಲೆಯ ಯುನಿಫಾರ್ಮ ನೀಲಿ ಬಣ್ಣದ್ದು. ಶೂ ಅಂತೂ ಇಲ್ಲವೇ ಇಲ್ಲ. ಬರಿಗಾಲ ನಡಿಗೆ. ಬಳೆ, ರಿಬ್ಬನ್ನು, ಹೂ ಮುಡಿಬಾರದು,ಕುಂಕುಮ ಇಡಬಾರದು ಎಂಬ ಕಾಯ್ದೆನೂ ಇಲ್ಲ. ಪಾಟೀಚೀಲ ಅಂದರೆ ಬಟ್ಟೆಯಲ್ಲಿ ಹೊಲಿದ ಈಗಿನ ಸಾಮಾನು ತರುವ ಚೀಲದಂತಿರುತ್ತಿದ್ದವು ಸಾಮಾನ್ಯವಾಗಿ.

ಮತ್ತೆ ಈ ಸ್ವಾತಂತ್ರದ ತಯಾರಿ ಉಗುರಿಗೆ ಬಣ್ಣ ಅಂದರೆ ಮನೆಯಲ್ಲಿ ಬೆಳೆದ ಮದರಂಗಿ ಸೊಪ್ಪನ್ನು ರುಬ್ಬಿ ರಾತ್ರಿ ಉಗುರಿನ ಮೇಲಿಟ್ಟು ಎಲೆಯಿಂದ ಕಟ್ಟಿ ಬೆಳ್ಳಂಬೆಳಗ್ಗೆ ಕೆಂಪಾಜ? ನೋಡುವ ಆತುರ. ನೀಲಿ ಫ್ರಾಕ್ ಇಸ್ತ್ರಿ ಅಂದರೆ ಒಪ್ಪವಾಗಿ ಮಡಚಿ ಅಪ್ಪ ಮಲಗುವ ದಿಂಬಿನ ಕೆಳಗೆ ಇಡುವುದು. ಅವರ ತಲೆ ಭಾರ ಇರುತ್ತಲ್ಲ!

ಇಂಥದ್ದೇ ಹೂ ಈ ದಿನಕ್ಕೆ ಮುಡಿಬೇಕು ಅಂತ ಮೊದಲೇ ಗಿಡದ ಮೊಗ್ಗನ್ನು ಆರಿಸೋದು. ದೇವರೆ ದೇವರೆ ಆ ದಿನಕ್ಕೆ ಅರಳಿಸು, ಮೊದಲೆ ಅರಳೋದು ಬೇಡಾ ಎಂಬ ಪ್ರಾರ್ಥನೆ. ಕಡ್ಠಿ,ಡೇರೆ, ಬಿಂಜರುಕಾಲು ಸೇವಂತಿಗೆ ಹೀಗೆ ಆಯ್ಕೆ. ಹಾಗೆ ಶಾಲೆಗೆ ತರಾವರಿ ಹೂವೆಲ್ಲ ಕೊಯ್ದು ಒಯ್ಯೋದು, ಅಕ್ಕೋರಿಗೆ ಗಿಡದಲ್ಲಿ ಮೊದಲು ಬಿಟ್ಟ ಡೇರೆ ಹೂ ಕೊಟ್ಟು ಸಂಭ್ರಮಿಸೋದು ಮಿಕ್ಕ ದಿನಗಳಲ್ಲಿ.

ರಾತ್ರಿ ಅರೆಬರೆ ನಿದ್ದೆ, ಎಷ್ಟೊತ್ತಿಗೆ ಬೆಳಗಾಗುತ್ತೊ ಅದೆಷ್ಟು ಬೇಗ ಶಾಲೆಗೆ ಹೋಗ್ತೀನೊ ಎಲ್ಲ ಅಲಂಕಾರ ಮಾಡಿಕೊಂಡು : ಸಿರ್ಸಿ ಜಾತ್ರೆ ರಿಬ್ಬನ್ನು, ಬಳೆ, ಇಸ್ತ್ರಿ ಅಂಗಿ, ಹೂವು ಎಲ್ಲ ಇರುಳುಗಣ್ಣಿನ ರಾತ್ರಿಯ ಕನಸು. ಪ್ರತೀ ವರ್ಷದ ಗಡಿಬಿಡಿ ಅವತಾರ ಅಮ್ಮನಿಗೆ ಗೊತ್ತು. ಆದರೂ ತಲೆ ಬಾಚಿಕೊಡುವಾಗ ಹಾಂಗೆ ಒಂದೆರಡು ವಟವಟಾ “ಥೊ….ಕೂಸೆ ಎಂತಕ್ಕೀನಮನಿ ಗಡಿಬಿಡಿ ಮಾಡ್ತೆ. ಸಮಾ ಕೂತಕ. ಜಡೆ ಹಣಿಯದು ಹ್ಯಾಂಗೆ ಈ ನಮನಿ ಮಾಡಿದ್ರೆ?” ಆದರೆ ನನ್ನ ಗಮನವೆಲ್ಲ ಶಾಲೆಯ ಕಡೆ.

ಮೊದಲಿನ ದಿನವೆ ಸಗಣಿ ಹಾಕಿ ಶಾಲೆಯ ಆವರಣ ತೊಡೆದು ರಂಗೋಲಿ ಹಾಕಿ ಶೃಂಗಾರಗೊಂಡದ್ದು ಒಮ್ಮೊಮ್ಮೆ ಈ ಮಳೆ ಬಂದು ಹಾಳು ಮಾಡಿದರೆ ಎಷ್ಟು ಬಯ್ಕೊತಾ ಇದ್ವಿ. ” ಗಣೇಶನಿಗೆ ಕಾಯಿಟ್ಟು ಮಳೆ ಬರದೇ ಇರಲಿ ಅಂತ ಬೇಡಿಕೊಂಡಿದ್ದು ಅವನಿಗೆ ಕೇಳಿದ್ದೇ ಇಲ್ಲೆ ಹದಾ?” ನಮ್ಮನಮ್ಮಲ್ಲೇ ಮಾತು.

ಊರ ಗಣ್ಯರು ಬಂದು ದ್ವಜಾರೋಹಣ ಮಾಡುತ್ತಿದ್ದದ್ದು ಬೆಳಗ್ಗೆ ಎಂಟು ಗಂಟೆಯ ಒಳಗಾದರೂ ನಾವೆಲ್ಲ ಮಕ್ಕಳು ಶಾಲೆಯಲ್ಲಿ ಜಮಾಯಿಸುತ್ತಿದ್ದು ಏಳು ಗಂಟೆಯ ಒಳಗೇ. ಅದೇನು ಸಂಭ್ರಮ, ಅದೇನು ಓಡಾಟ!!

ದ್ವಜಾರೋಹಣದ ನಂತರ ರಾಷ್ಟ್ರ ಗೀತೆ ಹೇಳಿ ಮಾಸ್ತರು, ಗಣ್ಯರಿಂದಲ್ಲದೆ ಒಂದೆರಡು ಮಕ್ಕಳಿಂದಲೂ ಭಾಷಣ ಜೈ ಜೈ ಕಾರ ಜೋರಾಗಿ ಇರ್ತಾ ಇತ್ತು. ಮಕ್ಕಳಿಗೆಲ್ಲ ಚಾಕ್ಲೇಟು, ಪೆಪ್ಪರ್ಮೆಂಟು ಹಂಚಿ ಅಂತ ಮಾಸ್ತರು ಕೊಡುವಾಗ ಅಲ್ಲೂ ನಾನು ನಾನು ಅಂತ ಪೈಪೋಟಿ.

ಆಗೆಲ್ಲ ಕ್ಲಾಸ್ ಮೊನಿಟರು ಪಿನಿಟರು ಇಲ್ಲ ಬಿಡಿ. ಇದ್ದಿದ್ದೇ ಒಂದೊಂದು ಕ್ಲಾಸಲ್ಲಿ ಐದರಿಂದ ಆರು ಎಂಟು ಹತ್ತು ಮಕ್ಕಳು ಒಂದರಿಂದ ಏಳನೇ ಕ್ಲಾಸಿನವರೆಗಿದ್ದ ಶಾಲೆ ಒಟ್ಟೂ ಮಕ್ಕಳ ಸಂಖ್ಯೆ ಒಂದೈವತ್ತು ಇರಬಹುದು. ಇರೋದೆರಡು ಕ್ಲಾಸ್ ರೂಮು. ಮಧ್ಯೆ ಬಟ್ಟೆ ಪಾರ್ಟೀಷನ್ ಮಾಡಿ ನಾಲ್ಕು ರೂಮು. ಇಂಥ ಸಂದರ್ಭದಲ್ಲಿ ಕರ್ಟನ್ ತೆಗೆದು ದೊಡ್ಡ ಹಾಲ್.

ಆದರೆ ಈಗ ಶಾಲೆ ತುಂಬಾ ಸುಧಾರಣೆ ಕಂಡಿದೆ. ಇನ್ನೂ ಎರಡು ಕೋಣೆ ಕಟ್ಟಿದ್ದು ಅಂಗನವಾಡಿ ಶಾಲೆ ಪಕ್ಕದಲ್ಲಿ ಅಡಿಗೆ ಕೋಣೆ, ಶೌಚಾಲಯ, ಶಿಕ್ಷಕರಿಗೆ ಉಳಿಯಲು ಪುಟ್ಟ ಮನೆ ಎಲ್ಲಾ ನಿರ್ಮಾಣವಾಗಿದೆ.

ಮಕ್ಕಳೆಲ್ಲ ಪೂರ್ವ ತಯಾರಿಯಲ್ಲಿ ನಡೆಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಊರ ಮಂದಿಯೆಲ್ಲ ಜಮಾಯಿಸುತ್ತಿದ್ದರು. ಸುಮಾರು ಹತ್ತು ಗಂಟೆಗೆ ಕಾರ್ಯಕ್ರಮ ಶುರುವಾಗಿ ಎರಡು ಗಂಟೆಗೆಲ್ಲ ಮುಗಿದು ಮನೆ ಸೇರಿ ಬೆಳಗಿನ ತಿಂಡಿನೂ ತಿನ್ನದೆ ಶಾಲೆಗೆ ಓಡಿ ಹೋದ ಹೊಟ್ಟೆ ಹಸಿವು ಆಗ ನೆನಪಾಗಿ ಅಮ್ಮ ಮಾಡಿದ ಸಿಹಿ ಪೊಗದಸ್ತಾದ ಅಡಿಗೆ ಊಟ ಮಾಡಿ ಮಲಗ್ತಿದ್ವಾ? ಇಲ್ಲಪ್ಪಾ ಇಲ್ಲ. ಅಪ್ಪ ಮಲಗೋದೆ ಕಾಯ್ತಾ ಇದ್ದು ಪಕ್ಕದ ಮನೆಗೆ ಓಟ. ಊರ ಮಕ್ಕಳೆಲ್ಲ ಸೇರಿ ಆ ದಿನದ ಬಗ್ಗೆ ಭಯಂಕರ ಚರ್ಚೆ. ಜೊತೆಗೆ ನೀ ಎಷ್ಟು ಚಾಕ್ಲೆಟ್,ಪೇಪರ್ಮೆಂಟು ತಿಂದೆ? ಅದೂ ಇದೂ ಎಲ್ಲ ಒಬ್ಬರನ್ನೊಬ್ಬರು ತನೀಖೆ ಆಗಲೇಬೇಕಿತ್ತು.

ಸಾಯಂಕಾಲ ಮನೆ ಜಗುಲಿಯಲ್ಲಿ ಕೂತು ಮನೆ ಮಂದಿಯೆಲ್ಲ ಶಾಲೆಯ ಕಾರ್ಯಕ್ರಮದ ಬಗ್ಗೆ ಮಾತಾಡುತ್ತಿರುವಾಗ ಅಪ್ಪ ” ಸ್ವಲ್ಪ ಸುಮ್ನಿರ್ರೆ. ಇಂದಿರಾ ಗಾಂಧಿ ಭಾಷಣ ಕೇಳಿ” ಅಂತ ರೆಡಿಯೊ ಸೌಂಡ್ ಜೋರಾಗಿ ಮಾಡಿ ಬೆಳಿಗ್ಗೆ ಕೇಳಿದ್ದು ಸಾಕಾಗದೆ ಮರು ಪ್ರಸಾರವಾಗಿದ್ದು ನಮಗೂ ಕೇಳಿಸುವ ಗತ್ತು. ಎಲ್ಲರೂ ಕದಂಕೋಲ್. ಅಪ್ಪ ಮಾತ್ರ ಮಧ್ಯೆ ಮಧ್ಯೆ ಭಾಷಣದ ಮಾತಿನ ವರ್ಣನೆ ಮಾಡಿದಾಗ ಅಜ್ಜಿ “ಈಗ ನೀ ಮಾತಾಡಿದರೆ ಅಡ್ಡಿಲ್ಯನಾ? ಕೂಸು ಎಂತದೊ ಹೇಳ್ತಾ ಇತ್ತು ಶಾಲೆ ಸುದ್ದಿ.” ತಕಳಪ್ಪ ಅಪ್ಪ ಹಿ…ಹಿ.. ಸೈಲೆಂಟು. ಆಗೆಲ್ಲ ನಾವು ಮಕ್ಕಳು ಅಜ್ಜಿ ಪಕ್ಷ.

ಆದರೆ ಇಂದಿರಾ ಗಾಂಧಿಯವರು ಹಿಂದಿಯಲ್ಲಿ ಮಾತಾಡಿದ್ದು ಅಲ್ಲಿ ಇರೊ ಯಾರಿಗೂ ಅರ್ಥ ಆಗದೇ ಇದ್ದರೂ ಅವರ ಭಾಷಣ ಕೇಳೋದು ಎಲ್ಲರಿಗೂ ಖುಷಿ. “ಎಷ್ಟು ಚಂದ ಮಾತಾಡ್ತು ನೋಡ್ರ” ಫುಲ್ ವಾಲ್ಯೂಮ್ ಊರೆಲ್ಲ ಕೇಳಬೇಕು ಹಾಗೆ.

ಆಹಾ! ಆ ವಾಯ್ಸ ಮರೆಯೋಕೆ ಸಾಧ್ಯವೇ?

14-8-2018. 2.33pm

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮ ಟಿಪ್ಪಣಿ ಬರೆಯಿರಿ