ಪುಸ್ತಕ – ತಿಂಮ ಸತ್ತಾಗ
ಲೇಖಕರು – ಬೀಚಿ
ಸಮಾಜ ಪುಸ್ತಕಾಲಯ, ಧಾರವಾಡ.
ಬೆಲೆ – 40/-
ಇಂದು ಬೀಚಿಯವರ ಪುಣ್ಯ ಸ್ಮರಣೆಯ ದಿನ. ಈ ದಿನ ಅವರನ್ನು ನೆನೆದು ಅವರ ಬರಹಗಳೊಂದಿಗೆ ನನ್ನ ಅಶ್ರುತರ್ಪಣದೊಂದಿಗೆ ಕೃತಾರ್ಥಳಾಗಲು ಈ ಪುಸ್ತಕ ಆರಿಸಿಕೊಂಡೆ.
ನಾನು ಈ ಪುಸ್ತಕ ಕೊಂಡುಕೊಂಡಿದ್ದು ಬೆಂಗಳೂರಿನಲ್ಲಿ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಹೈಸ್ಕೂಲ್ ದಿನಗಳಿಂದಲೂ ಇವರ ಸಾಹಿತ್ಯ ಓದುತ್ತಿದ್ದೆ. ಹಾಗೆ ನನಗೆ ಇನ್ನೂ ನೆನಪಿದೆ ; 1976ರಲ್ಲಿ ನನ್ನ ಸೋದರ ಮಾವ ಸಾಹಿತಿ ಪಿ.ವಿ.ಶಾಸ್ತ್ರಿ,ಕಿಬ್ಬಳ್ಳಿಯವರ ಮನೆಗೆ ಬೀಚಿಯವರು ಬಂದಾಗ ಅವರನ್ನು ನೋಡಿದ್ದು, ಹೊರಡುವಾಗ ಕಾಲಿಗೆರಗಿ ನಮಸ್ಕಾರ ಮಾಡಿದಾಗ “ಏನಮ್ಮಾ ನಿನ್ನ ಹೆಸರು?”…… “ಇವಳಿಗೆ ಸಂಗೀತಾ ಎಂದು ಹೆಸರು ಇಟ್ಟಿದ್ದು ನಾನೇ. ನನ್ನ ಅಕ್ಕನ ಮಗಳು”ಎಂದು ಮಾವ ಹೆಮ್ಮೆಯಿಂದ ಹೇಳಿಕೊಂಡಾಗ….. “ಸಂಗೀತ ಬರುತ್ತಾ? ಒಂದು ಹಾಡು ಹಾಡು” ಎಂದಾಗ ಮುದುರಿ ನಿಂತಿದ್ದು ಕಂಡು ನನ್ನ ತಲೆ ಸವರಿ ಆಶಿರ್ವಾದ ಮಾಡಿದ್ದು ಜೊತೆಗೆ ಎಲ್ಲರೂ ಜೋರಾಗಿ ನಕ್ಕಿದ್ದು…. ವಾಮನ ಮೂರ್ತಿಯ ನಗುಮುಖ ಎಲ್ಲವೂ ಈಗ ಕನಸು. ಆಗ ಸಾಹಿತ್ಯದ ಗಂಧಗಾಳ ಗೊತ್ತಿಲ್ಲದ ನನಗೆ ಅವರನ್ನು ಕಂಡಿದ್ದು ಮಾತ್ರ ಮಹಾ ಖುಷಿ ಆಗಿತ್ತು.
ತಮ್ಮ ಅದ್ಭುತ ಹಾಸ್ಯ ಬರಹಗಳಿಂದ ಖ್ಯಾತರಾದ ಬೀಚಿಯವರ ಮೂಲ ಹೆಸರು ರಾಯಸಂ ಭೀಮಸೇನರಾವ್. ದಿನಾಂಕ 29-4-1913ರಲ್ಲಿ ಹರಪನಹಳ್ಳಿಯಲ್ಲಿ ಜನ್ಮ ತಳೆದು ಕೇವಲ ತಮ್ಮ 67ನೇ ವಯಸ್ಸಿನಲ್ಲಿ 7-12-1980ರಲ್ಲಿ ಕಾಲವಾದದ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ತಮ್ಮ ಜೀವಿತಾವಧಿಯಲ್ಲಿ ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದು ಅವರ ಹಲವಾರು ಕೃತಿಗಳು ಮರು ಮುದ್ರಣಗೊಂಡಿವೆ. ಅವರು ಇನ್ನಷ್ಟು ವರ್ಷ ಬದುಕಿದ್ದರೆ ಇನ್ನೆಷ್ಟು ಪುಸ್ತಕಗಳು ಸಾಹಿತ್ಯದೊಡಲು ತುಂಬುತ್ತಿತ್ತೊ ಏನೋ!
ಬೀchiಯವರ ಚುಟುಕಗಳು, ನಗೆಹನಿಗಳು, ತಿಂಮ ದರ್ಶನಗಳು, ತಿಂಮ ರಸಾಯನಗಳು, ಹರಟೆಗಳು, ತಿಂಮನ ತಲೆ, ಹುಚ್ಚು ಹುರುಳು, ಚಿನ್ನದ ಕಸ, ಬೆಳ್ಳಿ ತಿಂಮ ನೂರೆಂಟು ಹೇಳಿದ, ಅಮ್ಮಾವ್ರ ಕಾಲ್ಗುಣ, ಹೆಂಡತಿ ನಕ್ಕಾಗ, ಸಂಪನ್ನರಿದ್ದಾರೆ ಎಚ್ಚರಿಕೆ, ಉತ್ತರ ಭೂಪ, ತಿಂಮಿಕ್ಷನರಿ, ಅಂದನಾ ತಿಂಮ ಮೊದಲಾದ ಹಾಸ್ಯ ಕೃತಿಗಳು ಇಂದಿಗೂ ಓದುಗರ ಮನ ಮನೆಗಳಲ್ಲಿ ರಾರಾಜಿಸುತ್ತಿವೆ.
ಬೀಚಿಯವರ ಕಲ್ಪನೆಯ ಪಾತ್ರಧಾರಿ “ತಿಂಮ” ಅವರ ಅನೇಕ ಕೃತಿಗಳಲ್ಲಿ ಮರು ಹುಟ್ಟು ಪಡೆಯುತ್ತಾನೆ. ಅವರೇ ಹೇಳುವಂತೆ “ಈ ಹೆಸರು ದಡ್ಡತನದಲ್ಲಿ ಕಂಡು ಕೇಳಿದ ಚೇಷ್ಟೆಗಳಿಗೆಲ್ಲಾ –ಪಾಪ! ತಿಂಮನನ್ನೇ ನಾಯಕನನ್ನಾಗಿ ಒಡ್ಡಿದ್ದೇನೆ. ತಿಂಮನ ನಗು ದೇಹವಾದರೆ ಆ ನಗುವಿನ ಹಿಂದೆ ಹುದುಗಿಕೊಂಡಿರುವ ನೋವೇ ಜೀವ, ಅದನ್ನು ಗುರುತಿಸದಿದ್ದರೆ ದೊರೆಯುವುದು ತಿಂಮನ ಹೆಣ ಮಾತ್ರ”.
“ತಿಂಮ ಸತ್ತಾಗ” ಈ ಪುಸ್ತಕದಲ್ಲಿ ಒಟ್ಟೂ ಎಂಟು ನಾಟಕಗಳು ಇವೆ. ಮೊದಲ ನಾಟಕ “ತಿಂಮ ಸತ್ತಾಗ” ನಾಟಕದಲ್ಲಿ ಒಟ್ಟೂ ಹನ್ನೊಂದು ಪಾತ್ರದಾರಿಗಳನ್ನು ಸೃಷ್ಟಿಸಿದ್ದಾರೆ. “ತಿಂಮ” ಮುಖ್ಯ ಪಾತ್ರಧಾರಿ ಶವದಂತೆ ಮಲಗಿರುತ್ತಾನೆ. ಅವನ ಸುತ್ತಲೂ ಅವನ ಹೆಂಡತಿ, ತಾಯಿ, ವಿದ್ಯಾರ್ಥಿ,ಸಾಕಿದ ದೊಡ್ಡಮ್ಮ, ಅವಿವಾಹಿತ ಮಗಳು, ನಾಲ್ಕು ವರ್ಷದ ಪುಟ್ಟ ಮಗು, ಆಚಾರ್ಯರು,ಪಕ್ಕದ ಮನೆ ವಿಧವೆ ಇವರೆಲ್ಲರೂ ತಿಂಮನ ಸಾವಿನ ನೋವಿನಲ್ಲಿ ಗೋಳಾಡುತ್ತ ಅಲವತ್ತುಗೊಳ್ಳುವ…. ನನಗೆ ಸಾವು ಬರಬಾರದಿತ್ತಾ ಎಂದು ಹಪಹಪಿಸುವ ಕೊನೆಗೆ ತಿಂಮ ನಿದ್ದೆಯಿಂದ ಎದ್ದಂತೆ ಎದ್ದು ಕೂತಾಗ ತಮ್ಮ ಜೀವ ಕೊಡಲು ಇಲ್ಲದ ಕಾರಣ, ನೆಪ ಹೇಳುವುದು, ಪಲಾಯನ ಮಾಡಿದ ಪರಿ ಎಲ್ಲವೂ ಎಷ್ಟೊಂದು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ! ಕೊನೆಯಲ್ಲಿ ತಾಯಿ ಗಂಗವ್ವ ಮೊದಲು ಆಗ ಅಂದುಕೊಂಡಂತೆ ನಾನು ಹೊರಟೆ ಎಂದು ಕಣ್ಣು ಮುಚ್ಚುತ್ತಾಳೆ.
ಇಲ್ಲಿ ಬದುಕಿನ ವಾಸ್ತವ ಸಂಗತಿ,ಜೊತೆಗಿದ್ದವರ ಒಳಗುಟ್ಟು, ನಾಟಕೀಯ ವ್ಯಕ್ತಿತ್ವ, ಯಾರ ಪ್ರೀತಿ ಸತ್ಯ, ಸುಳ್ಳುಗಳ ಅನಾವರಣ ಎಲ್ಲವನ್ನೂ ಅರಿಯಲು ಒಂದು ವೇದಿಕೆ ಕಲ್ಪಿಸಿ ಜನರ ಮುಂದಿಟ್ಟಿದ್ದಾರೆ.
ಕೊನೆಯಲ್ಲಿ ಬೀಚಿ ತಿಂಮನನ್ನು ಕುರಿತು ಆಡುವ ಮಾತುಗಳು ಪುಸ್ತಕ ಓದಿಯೇ ಅನುಭವಿಸಬೇಕು. ನಗೆ ಗಡಲಲ್ಲಿ ತೇಲಿಸುವ ನಾಟಕ ಓದುತ್ತ ಒಮ್ಮೆ ಬೀಚಿಯವರೂ ಹೀಗೆ ಎದ್ದು ಬಂದುಬಿಡಬಾರದಿತ್ತೇ…ಅನಿಸಿ ಕಣ್ಣು ಮಂಜಾಗಿಸಿತು.
ಹೆಚ್ಚು ಬರೆಯಲಾದೀತೇ……
ಪುಸ್ತಕದಲ್ಲಿಯ ಪ್ರತಿಯೊಂದು ನಾಟಕಗಳಲ್ಲಿ ಪಾತ್ರಧಾರಿಯಾಗಿ ಬೀಚಿಯವರು ಅದೆಷ್ಟು ಸೊಗಸಾಗಿ ಬರೆದಿದ್ದಾರೆ ಅಂದರೆ ನಿಜಕ್ಕೂ ಮೈನವಿರೇಳಿಸುತ್ತದೆ, ಮತ್ತೆ ಮತ್ತೆ ಓದಿ ನಗು ಕೂಡಾ ಉಕ್ಕಿ ಬರುತ್ತದೆ ಹಾಗೂ ಚಿಂತನೆಗೀಡು ಮಾಡುತ್ತದೆ. ನಗುವಿನಲ್ಲೂ ನವಿರಾಗಿ ಬದುಕಿನ ಸತ್ಯ ಅರಿವಾಗಿಸಿದ್ದಾರೆ.
ವಾಮನ ಮೂರ್ತಿಯ ನಗೆ ಕಣ್ತುಂಬಿಕೊಂಡು ಇವತ್ತಿನ ದಿನ ಅವರನ್ನು ನೆನೆಯುತ್ತ ನಾನು ಕಂಡ ನನ್ನ ನೆಚ್ಚಿನ ಸಾಹಿತಿ ಬೀಚಿಯವರು ಸದಾ ಈ ದಿನ ತಪ್ಪದೇ ನೆನಪಿಗೆ ಬಂದುಬಿಡುತ್ತಾರೆ. ಏಕೆಂದರೆ ಇವತ್ತು ನನ್ನ ಜನ್ಮದಿನ ಅವರನ್ನು ಕಳೆದುಕೊಂಡ ದಿನ. ಭಗವಂತ ಅವರ ಆತ್ಮಕ್ಕೆ ಸದಾ ಶಾಂತಿ ಕೊಡಲಿ. ನಗುವಿನ ಸರದಾರನ ನೆನಪು ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರಲಿ.
7-12-2021. 8.25pm