ಇದು 27 ವಷ೯ಗಳ ಹಿಂದೆ ನಡೆದ ಕ್ಷಣ. ಅಮ್ಮನ ಇಡೀ ದೇಹ ರೊಮೈಟೆಡ್ ಅರ್ಥೈಟೀಸ್ ಕಾಯಿಲೆ ಆವರಿಸಿ ನೋವಿನಿಂದ ನರಳುತ್ತ ಹಾಸಿಗೆಯಿಂದ ಏಳಲಾರದ ಪರಿಸ್ಥಿತಿಯಲ್ಲಿ ಮಲಗಿದ್ದರು. ರಾತ್ರಿ 8ಕ್ಕೆ ನಾನೇ ಊಟ ಮಾಡಿಸಿ ಮಲಗಿಸಿದ್ದೆ. ಮಗಳ ಬಾಳಂತನಕ್ಕೆ ಊರಿಗೆ ಹೋದವಳು ಅಮ್ಮ ಇಹಲೋಕದ ಯಾತ್ರೆ ಮುಗಿಸಿದ್ದು ನೋಡುವ ಹಾಗಾಯಿತು. ಅದು ಉತ್ತರಾಯನ ಪುಣ್ಯ ಕಾಲ, ಜನವರಿ ಇಪ್ಪತ್ತು, ಮುತ್ತೈದೆ ಸಾವು. ವಯಸ್ಸು ಕೇವಲ ಐವತ್ತೆರಡು ವರ್ಷ ಇರಬಹುದು. ಏಕೆಂದರೆ ಅಮ್ಮನ ಜನ್ಮ ದಿನ ಗೊತ್ತಿಲ್ಲ.
ಕರೆದುಕೊಂಡು ಹೋಗುವಾಗಲೇ ಅದಾವ ದೈವ ಅವರ ಬಾಯಲ್ಲಿ ಹೇಳಿಸಿತ್ತೊ’ ಮಗಳೆ ಐದು ತಿಂಗಳು ಬಾಳಂತನ ಮುಗಿಸಿಕೊಂಡು ಹೋಗು’. ರಾತ್ರಿ 12ಗಂಟೆ ಐದು ತಿಂಗಳು ಮುಗಿದ ವೇಳೆ ನನ್ನ ಕೈಯ್ಯಾರೆ, ‘ಗಂಗಾ ಜಲ ಅರೆಬರೆ ಕುಡಿದು, ಗಂಟಲಲ್ಲಿ ಗೊಟಕ್ ಅನ್ನುವ ಶಬ್ದ, ಕಣ್ಣು ನಿದಾನವಾಗಿ ಮುಚ್ಚಿತು’ ಪ್ರಾಣ ಹೋಗುವ ಸಮಯ ಕಣ್ಣಾರೆ ಕಂಡೆ. ಆ ಸಂಕಟ ಅಳು ಮುಗಿಲು ಮುಟ್ಟಿತು ಕರುಳು ಕಿತ್ತು ಬರುವ ಹಾಗೆ. ಊಹಿಸಿರಲಿಲ್ಲ ಸಾವು!
ಅದುವರೆಗೂ ಓಡಾಡಿಕೊಂಡಿದ್ದವರು ಐದು ತಿಂಗಳು ಮುಗಿಯುವ ನಾಲ್ಕು ದಿನ ಮೊದಲು ಸಂಕ್ರಾಂತಿ ದಿನದ ಸಾಯಂಕಾಲ ಹಾಸಿಗೆ ಹಿಡಿದಿರೋದು ಸಾಯಲು ಹುಲ್ಲು ಕಡ್ಡಿ ನೆವ ಬೇಕು ಎಂಬ ಮಾತು ಅಕ್ಷರ ಸಹ ನಿಜ ಆಗೋಯ್ತು. ಎಂಥ ಕಾಕತಾಳೀಯ!
“ಸಾವಿನ ನಿಜವಾದ ದುಃಖದ ತೀವ್ರತೆ ನಮ್ಮ ಹತ್ತಿರದವರ ಮರಣದಲ್ಲಿ ತಿಳಿಯುವುದು” ಎಲ್ಲೊ ಓದಿದ ನೆನಪು. ನಿಜಕ್ಕೂ ಹೌದು. ಸ್ವತಃ ಅನುಭವಿಸಿದೆ. ಹುಟ್ಟಿನಿಂದ ಅಮ್ಮನಿಲ್ಲದ ಪ್ರಪಂಚ ಹೊಂದಿಕೊಳ್ಳಲು ವಷ೯ಗಳೇ ಬೇಕಾಯಿತು. ಆ ದಿನಗಳು ಯಾವತ್ತೂ ಮಾಸೋದಿಲ್ಲ. ಅಮ್ಮನಿಲ್ಲದ ತವರಿಗೆ ಹೋಗುವ ಕಾತರ ಈಗಿಲ್ಲ.
ದಿನ ಕಾಯ೯ ಮುಗಸಿ ವಾಪಸ್ಸು ಬರುವಾಗ ಮಗಳು ಕೈಯಲ್ಲಿ ಹಸು ಗೂಸು ನೆನಪಿಸುತ್ತಾಳೆ ಅಮ್ಮ ನಾನಿದಿನಿ.
1997ರಲ್ಲಿ ಇದೇ ಕಾಯಿಲೆ ನನಗೂ ಬಂತು. 2007 ರವರೆಗೆ ಹೋಮಿಯೊಪತಿ,ಅಲೋಪತಿ,ಆಯುವೆ೯ದಿಕ ಎಲ್ಲ ಔಷಧಿ ತೆಗೆದುಕೊಂಡೆ. ಕಡಿಮೆ ಆಗಲಿಲ್ಲ. ಚಿಕನ್ ಗುನ್ಯಾ,ಸಯಾಟಿಕ(ಸೊಂಟ ನೋವು)ಬಂತು. ಕೆಲಸ ಬಿಟ್ಟೆ. ಕೊನೆಗೊಂದು ದಿನ ಯೋಗಕ್ಕೆ ಸೇರಿದೆ. ನಡೆಯೋಕೆ ಆಗದಿದ್ದವಳು ಕೇವಲ 15ದಿನದಲ್ಲಿ ಮಡಿಕೇರಿ’ಬ್ರಹ್ಮಗಿರಿ’ ಬೆಟ್ಟ ಹತ್ತಿ ಬಂದೆ. ಈಗ ಶುಗರ ಬಂದಿದೆ. ಯೋಗದಲ್ಲೇ ಎಲ್ಲ ಕಂಟ್ರೋಲ್ ಇದೆ ಯಾವ ಮಾತ್ರೆ ಇಲ್ಲದೆ.
ನನ್ನ ಸ್ವಂತ ಅನುಭವದಲ್ಲಿ ಪ್ರತಿಯೊಬ್ಬರಿಗೂ ಹೇಳುವುದಿಷ್ಟೆ, ಕಾಯಿಲೆ ಮನುಷ್ಯನಾದವನನ್ನು ಯಾರನ್ನೂ ಬಿಟ್ಟಿಲ್ಲ. ಅದು ಬಂದಾಗ ದೃತಿಗೆಡದೆ ಸ್ವ ಮನಸ್ಸನಿಂದ ಅದರ ಪರಿಹಾರಕ್ಕಾಗಿ ಛಲ ತೊಡಬೇಕು. ನಮ್ಮಲ್ಲಿರುವ Willpower ಅಧ೯ ಕಾಯಿಲೆ ಗುಣ ಮಾಡುತ್ತದೆ. ಆರು ತಿಂಗಳು ಹಾಸಿಗೆ ಹಿಡಿದ ನನ್ನನ್ನು ‘ಇವಳೂ ಅಮ್ಮನ ದಾರೀನೆ ಹಿಡಿಯೋದು’ ಅಂತ ಆಡಿಕೊಂಡಾಗ ನನ್ನಲ್ಲಿ ಒಂದು ರೀತಿ ಛಲ ,ಈಗ ನಿಮ್ಮ ಮುಂದೆ ಬದುಕಿದ್ದೇನೆ.
ಬಹುಶಃ ಅಮ್ಮನಿಗೂ ಯೋಗದ ಶ್ರೀ ರಕ್ಷೆ ಸಿಕ್ಕಿದ್ದರೆ ಅಕಾಲಿಕ ಮರಣ ಹೊಂದುತ್ತಿರಲಿಲ್ಲವೇನೊ! ನೆನೆದಾಗ ಕಣ್ಣು ಮಂಜಾಗುತ್ತದೆ. ಕೊನೆಯ ಕ್ಷಣ ನೆನಪಾಗುತ್ತದೆ.
ಇವತ್ತು ಅಮ್ಮನ 27ನೇ ವರ್ಷದ ತಿಥಿ ಶಾಸ್ತ್ರ ಊರಲ್ಲಿ ನಡೆಯುತ್ತಿದೆ. ಅಣ್ಣ ಕರೆದರೂ ಹೋಗುವ ಮನಸ್ಸಿಲ್ಲ. ಅಮ್ಮನಿಲ್ಲದ ಆ ಮನೆ ಪ್ರೀತಿ ಇಲ್ಲದ ತವರಂತೆ ಭಾವ. ಮಕ್ಕಳ ಏಳ್ಗೆಯನ್ನೆ ಬಯಸುವ ಜೀವ, ಬರುವ ದಾರಿ ತುದಿಗಾಲಲ್ಲಿ ನಿಂತು ಗೋಣುದ್ದ ಮಾಡಿ ಕಾಯುವ ರೀತಿ, ಬರಲು ತಡವಾದರೆ ಏನೊ ಆಗಿಹೋಗಿದೆಯೆಂಬಂತೆ ಒದ್ದಾಡುವ ಪರಿ, ಆ ಮನೆಯಿಂದ ಹೊರಡುವಾಗ ಕಣ್ಣಲ್ಲಿ ನೀರು ತುಂಬಿಕೊಂಡು ಊರ ತುದಿಯವರೆಗೂ ಬಂದು ಬೀಳ್ಕೊಡುವ ದೃಶ್ಯ, ಇರುವಷ್ಟು ದಿನ ಊರಗಲದ ಸುದ್ದಿ ಬಿಚ್ಚಿಟ್ಟು ಕಷ್ಟ ಸುಃಖ ತನ್ನದೆಂಬಂತೆ ವರದಿ ಒಪ್ಪಿಸುವದು, ಮಾತ್ರೆಗಳ ಒಡನಾಟದಲ್ಲಿ ತನ್ನ ನೋವು ಶಮನಕ್ಕಾಗಿ ಪಟ್ಟ ಪಾಡು ಎಲ್ಲವೂ ಸುರುಳಿ ಬಿಚ್ಚಿದಂತೆ ನೆನಪಾಗುತ್ತಿದೆ. ಯಾರು ಎಷ್ಟೇ ಕರೆದರೂ, ಆದರಿಸಿದರೂ ಆ ಅಮ್ಮನ ಪ್ರೀತಿಗೆ ಯಾರೂ ಸಮಾನರಾಗೋಕೆ ಸಾಧ್ಯವೇ ಇಲ್ಲ. ಆ ಪ್ರೀತಿಯ ನೆನಪುಗಳೇ ನನಗೆ ಶ್ರೀ ರಕ್ಷೆ. ಕೋಟಿ ನಮಸ್ಕಾರ ಮಾಡಿದರೂ ಮುಗಿಯದು ನಿನ್ನ ಋಣ. ಅಮ್ಮಾ…..
7-2-2017. 5.43pm.