ನನ್ನ ಮೂರನೆಯ ಕೃತಿಯ ಕುರಿತು ಓದುಗರ ಅಭಿಪ್ರಾಯ

ಮಲೆನಾಡಿನ ಹವ್ಯಾಸಿ ಓದುಗರಾದ ಶ್ರೀ ಟಿ.ಎಂ.ಭಟ್ ರವರು ನನ್ನ ಮೂರನೆಯ ಕೃತಿಯನ್ನು ಕೊಂಡು ಓದಿ ತಮ್ಮ ಅಭಿಪ್ರಾಯಗಳನ್ನು ಬರೆದು ಕಳುಹಿಸಿದ್ದಾರೆ.  

Facebook ನಲ್ಲಿ ನನ್ನ ಬರಹಗಳನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಇವರು ಈ ಹಿಂದೆ ನನ್ನ ಮೊದಲ ಕೃತಿಯನ್ನೂ ಸಹ ಕೊಂಡು ಓದಿ ಅಭಿಪ್ರಾಯ ಬರೆದು ತಿಳಿಸಿದ್ದಲ್ಲದೇ ಪ್ರತಿ ಮನೆಯಲ್ಲಿ ಇರಬೇಕಾದ ಕೃತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇವರ ಪ್ರೋತ್ಸಾಹದ ನುಡಿಗಳಿಗೆ ಅನಂತ ಧನ್ಯವಾದಗಳು 🙏 

************

ನಮಸ್ಕಾರ. ‘ಸುತ್ತಾಟದ ಸಂಭ್ರಮ’ ಓದಿದೆ. ಇದರಲ್ಲಿ ಲೇಖಕರು ಪೋರ್ಟ್ ಬ್ಲೇರ್,ಧರ್ಮಸ್ಥಳ, ಸುಬ್ರಹ್ಮಣ್ಯ,ರಾಮೇಶ್ವರಂ, ಕನ್ಯಾಕುಮಾರಿ,ಮಧುರೈ, ಕಾಶಿ, ಗಯಾ, ಅಯೋಧ್ಯೆಗಳಿಗೆ ಕೈಗೊಂಡ ಪ್ರವಾಸದ ವಿವರ ಇದೆ.  ಅಂಡಮಾನ್ ದ್ವೀಪ ಸಮೂಹ, ಅಯೋಧ್ಯೆ, ಗಯಾ ಬಿಟ್ಟು ಉಳಿದ ಸ್ಥಳಗಳಿಗೆ  ನಾನೂ ಹೋಗಿ ಬಂದಿದ್ದೆ. ಮರೆತು ಹೋಗುವ ಕಾಲ. ನೆನಪಿಸಿದಂತಾಯಿತು!  

ಇವರ ಕಥನದಲ್ಲಿ ಪ್ರವಾಸವೂ ಇದೆ, ಯಾತ್ರೆಯೂ ಇದೆ. ಪ್ರವಾಸವು ಕುತೂಹಲ, ಜಿಗೀಷೆಯಿಂದ ನಡೆದರೆ ಯಾತ್ರೆ ಭಕ್ತಿಯಿಂದ, ಶರಣಾಗತಿಯಿಂದ ನಡೆದಿರುತ್ತದೆ. ಈ ಪುಸ್ತಕ ಈ ಎರಡು ದೃಷ್ಟಿಯಿಂದಲೂ ಸಮಾಧಾನಕರ. ಲೇಖಕರ  ಸ್ವಾನುಭವದ ವಿವರಣೆ, ಸ್ಥಳಪುರಾಣ, ಐತಿಹ್ಯ ಅಲ್ಲಲ್ಲಿ ಎದ್ದು ಕಾಣುತ್ತವೆ. ಇಂಥ ಕಥನ ಪ್ರವಾಸ ಮಾರ್ಗದರ್ಶಿ, ಕ್ಷೇತ್ರದರ್ಶನ ಎನ್ನಿಸುತ್ತದೆ.   ಕೆಲ ವಿಷಯಗಳಲ್ಲಿ ಇದು ಓದುಗರ ಕುತೂಹಲವನ್ನು ತಣಿಸುತ್ತದೆ. 

ಕುಂಭ ಮೇಳ, ಗಯಾಶ್ರಾದ್ಧ, ಎರಡು ಕಾಶಿಗಳು, ಎರಡು ವಿಶ್ವನಾಥ ಲಿಂಗಗಳು, ಮನೆಗೆ ತರುವ ವಿಷ್ಣುಪಾದ, ಫಲ್ಗುಣಿ ನದಿಗೆ ಸೀತಾಮಾತೆಯ ಶಾಪ, ಕಾಶಿದಾರ ಎಲ್ಲದರ ಹಿನ್ನೆಲೆ ತಿಳಿದು, ತಿಳಿಸಿದ್ದಾರೆ. ಅಲ್ಲಲ್ಲಿಯ ತಿಂಡಿ ತಿನಿಸುಗಳ ಪ್ರಸ್ತಾಪ ಇಲ್ಲಿದೆ. ವೇಣಿದಾನದ ಮೂಲ ಪುರೋಹಿತರಿಗೂ ತಿಳಿದಂತಿಲ್ಲ! ಆಟೋದವರ, ಭಿಕ್ಷುಕರ, ಬ್ರಾಹ್ಮಣರ ಬಡತನಕ್ಕೆ ಲೇಖಕರು ಸ್ಪಂದಿಸಿದ್ದು ವಿಶೇಷ.  ಕಾಶಿಯಾತ್ರೆಯ ಕಥನದಂತೆ ಉಳಿದ ಯಾತ್ರೆಗಳ ಕಥನವೂ ತುಂಬಾ ಆತ್ಮೀಯವಾಗಿದೆ. 

ಇನ್ನು ಅಂಡಮಾನ್ ಪೋರ್ಟ್ ಬ್ಲೇರ್. ಕೆಲವು ವರ್ಷಗಳ ಹಿಂದೆ ಅಲ್ಲಿಗೆ ಹೋಗಿ ಬಂದ ಗೆಳೆಯರೊಬ್ಬರು, ಇತ್ತೀಚೆಗೆ ಹೋಗಿ ಬಂದ ನನ್ನ ಬಳಗದವರು ಕಳಿಸಿದ ಫೋಟೋಗಳಿಗೆ ಪೂರಕವಾದ ಓದು. 

ಶ್ರೀಮತಿ ಗೀತಾ ಹೆಗಡೆ, ಕಲ್ಮನೆಯವರ ಈ ‘ಸುತ್ತಾಟದ ಸಂಭ್ರಮ’,  ಓದಬೇಕಾದ, ಓದಿಸಿ ಕೊಳ್ಳುವ, ಸಂಗ್ರಹಯೋಗ್ಯ ಪುಸ್ತಕ .

T M Bhat

11-3-2024

ಪುಸ್ತಕ ಓದುವ ಆಸಕ್ತಿ ಇರುವವರು ನನ್ನ ಮೂರೂ ಕೃತಿಗಳನ್ನು onlineನಲ್ಲೂ ತರಿಸಿಕೊಳ್ಳಬಹುದು. ಲಿಂಕ್ 👇

13-5-2024

ಎಷ್ಟು ಸುಲಭ!

ಹತ್ಯೆ ಎಂದರೆ 

ತರಕಾರಿ ಕತ್ತರಿಸುವುದಕ್ಕಿಂತ ಸುಲಭ ಬಿಡಿ 

ಮಾರ್ಕೆಟ್ಟಿಗೆ ಹೋಗಿ 

ಚೌಕಾಸಿ ಮಾಡಿ ತರಕಾರಿ ಆಯ್ದು 

ಹೊತ್ತು ತರಬೇಕಿಲ್ಲ 

ತೊಟ್ಟು ತೆಗೆದು ನಾರು ಬಿಡಿಸಿ 

ತೊಳೆಯಬೇಕಿಲ್ಲ

ಜಸ್ಟ್ ಕತ್ತರಿಸಿದರೆ ಸಾಕು.

ಚೆಲ್ಲಾಪಿಲ್ಲಿಯಾಗಿ ಬಿದ್ದ 

ಕಸ ಸಿಪ್ಪೆ ಬಳಿದು ತೆಗೆಯಬೇಕಿಲ್ಲ 

ಬಿದ್ದಲ್ಲೇ ಬಿದ್ದ ರುಂಡ ಮುಂಡ 

ಕಾಲು ಕೈ ರಕ್ತದಲ್ಲಿ ಬಿದ್ದು ಒದ್ದಾಡಿದರೂ 

ತಿರುಗಿಯೂ ನೋಡಬೇಕಿಲ್ಲ.

ಆದರೆ ಒಂದೇ ಒಂದು ವ್ಯತ್ಯಾಸ 

ದೊಡ್ಡ ಹತಿಯಾರ ಇದ್ದರೆ ಸಾಕು 

ಅಡಗಿಸಿಕೊಂಡ ಕೈ ಸರಕ್ಕನೆ ತೆಗೆದು 

ಏಕ್ ಮಾರ್ ದೋ ತುಕಡಾ 

ಕೆಲಸ ಮಟಾಷ್……..

ಎಷ್ಟು ಸುಲಭ ನೋಡಿ 

ಮನಸ್ಸು ದೇಹ ಎಲ್ಲ ದ್ವೇಷ, ಅಸೂಯೆಯಿಂದ 

ತುಂಬಿ ಕೆಂಡಾಮಂಡಲವಾಗಿ ರೋಶ ಉಕ್ಕಿದಾಗ 

ತಾನೇ ಮಾಡಬೇಕೆಂದೆನೂ ಇಲ್ಲ 

ವಹಿಸಿದರೆ ಆಯಿತು 

ಕಾಂಚಾಣ ಮಾತನಾಡುತ್ತದೆ

ಇನ್ನೇನು?

ಈ ಬಿಸಿಲು ಬೇಗೆ ಸೆಕೆಯಲ್ಲಿ 

ತರಕಾರಿ ತಂದು, ತೊಳೆದು, ಹೆಚ್ಚಿ 

ಬೇಯಿಸಿ ಅಡಿಗೆ ಮಾಡಿ ಬಡಿಸಿ 

ಪಾತ್ರೆ ತೊಳೆದು…..

ಅಬ್ಬಬ್ಬಾ ಎಷ್ಟೊಂದು ಕೆಲಸ

ಕೊನೆಗೆ ಕಾಸು ಕೊಡುವವರೂ ಇಲ್ಲ 

ಪ್ರಚಾರ, ಪಬ್ಲಿಸಿಟಿಯಂತೂ ಇಲ್ಲವೇ ಇಲ್ಲ.

ಹತ್ಯೆ ಎಂದರೆ ಬಹಳ ಬಹಳ

ಸುಲಭ ಬಿಡಿ ಈಗ

ಸಿಕ್ಕಾಕಿಕೊಂಡರೆ ಜೈಲಿನಲ್ಲಿ ರಾಜೋಪಚಾರ

ಪಾರ್ಟಿ ಪ್ರೆಸ್ಟೀಜ್ ಮಾತ್ರ ನಿಗೂಢ 

ನಾನವನಲ್ಲಾ ನಾನವನಲ್ಲಾ ನಾನವನಲ್ಲಾ 

ಇಷ್ಟೇ!

22-4-2024  9.30pm

ನನ್ನ ಮೂರನೆಯ ಕೃತಿಯ ಕುರಿತು ಓದುಗರ ಅಭಿಪ್ರಾಯ

ಪುಸ್ತಕ ಅವಲೋಕನ ವಿಭಾಗದಲ್ಲಿ ಹಿಂದೊಮ್ಮೆ ನನ್ನ ಮೊದಲ ಕೃತಿ ಪರಿಚಯಿಸಿದಾಗ ಓದಿ ಪ್ರೋತ್ಸಾಹ ನೀಡಿದ್ದಲ್ಲದೇ ಇದುವರೆಗೂ ನನ್ನ ಎಲ್ಲಾ ಕೃತಿಗಳನ್ನು ಕೊಂಡು ಓದಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಶ್ರೀ Dharu P Kakkalameli ರವರಿಗೆ ಅನಂತ ಧನ್ಯವಾದಗಳು 😊🙏

***************

ಹೊಸದೊಂದು ಕೃತಿ 

ಲೇಖಕಿ- ಗೀತಾ ಜಿ ಹೆಗಡೆ

ಈ ಕೃತಿ ಗೀತಾ ಜಿ ಹೆಗಡೆ ಬೆಂಗಳೂರು ರವರು ಬರೆದ ಹೊಸದೊಂದು ಪುಸ್ತಕ. ಇದು ಅವರ ಮೂರನೇಯ ಕೃತಿ. ಮೊದಲನೆಯದು “ಮನಸೇ ನೀನೇಕೆ ಹೀಗೆ”(ಲೇಖನ ಸಂಗ್ರಹ ಪುಸ್ತಕ)ಎರಡನೆಯದು “ಖಾಲಿ ಹಾಳೆ”(ಕಥಾಸಂಕಲನ).!! ಮೂರನೇಯದು “ಸುತ್ತಾಟದ ಸಂಭ್ರಮ”. ಈ ಮೂರನೆಯ ಪುಸ್ತಕವು ಪ್ರವಾಸಾನುಭವದ ಕಥೆಗಳನ್ನು ಒಳಗೊಂಡಿರುವಂತ ಕೃತಿಯಿದು. 

ಕೃತಿಯ ಒಳಗಡೆ ಹೋಗುವದಕ್ಕಿನ್ನ ಮೊದಲು ಕೃತಿಯ ಬೆನ್ನುಡಿಗೆ ಹಾದು ಬರೋಣ ಬನ್ನಿ.

ಪ್ರವಾಸ ಕೈಗೊಳ್ಳುವವರಲ್ಲಿ ಕನಿಷ್ಠ ಎರಡು ವಿಧದ ಜನರಿರುತ್ತಾರೆ; ಉಭಯಜೀವಿಗಳು (ಇವರು ನೀರು, ನೆಲ ಎರಡೂ ಪ್ರವಾಸವನ್ನು ಕೈಗೊಳ್ಳಲು ಆಶಿಸುವವರು ಮತ್ತು ಎರಡೂ ಕಡೆಗಳಲ್ಲಿನ ನಾವೀನ್ಯಗಳನ್ನು ಅನುಭವಿಸಲು ಬಯಸುವವರು) ಹಾಗೂ ಯಾವುದೇ ಕಾರಣಕ್ಕೂ ಭೂಪ್ರದೇಶದಿಂದ ಹೊರಹೋಗದ ‘ನೆಲಗೋಂದು’ಗಳು. ಅಂಡಮಾನ್ ಪ್ರಯಾಣದಲ್ಲಿ ಲೇಖಕಿಗೆ ಎರಡೂ ವರ್ಗದ ಜನರ ಪರಿಚಯವಾಯಿತು. ಭಾರತಕ್ಕೆ ಸೇರಿಯೂ ಸೇರದಂತೆ ಇರುವ ಈ ದ್ವೀಪದ ವಿಷಯವನ್ನು ಲೇಖಕಿ ಚಿತ್ತಾಕರ್ಷಕವಾಗಿ ಮಂಡಿಸಿದ್ದಾರೆ. ಸ್ಟಾರ್ಕೆಟಿಂಗ್ ,ಡೀಪ್ ಸೀ ಡೈವಿಂಗ್ ಮುಂತಾದ ‘ನೆಲಗೋಂದು ಗಳಿಗೆ ಅನೂಹ್ಯವಾಗಿಯೇ ಉಳಿದ ಪ್ರಪಂಚವನ್ನು ಇಲ್ಲಿ ಪರಿಚಯಿಸಿದ್ದಾರೆ. ದ್ವೀಪವಾಸದ ಅನುಭವವನ್ನು ಕೆಲವು ಹೋಲಿಕೆಗಳ ಮೂಲಕ ನೀಡಿರುವ ಪ್ರವಾಸಕಥನಗಳಿಗಿಂತ ಕೊಂಚ ಭಿನ್ನ ಕ್ರಮವೆನಿಸುತ್ತದೆ. 

 ಗೀತಾ ಹೆಗಡೆ ಒಂಟಿಯಾಗಿಯೂ, ಜಂಟಿಯಾಗಿಯೂ ಪ್ರವಾಸ ಮಾಡುವುದರಲ್ಲಿ ಸುಖವನ್ನೂ, ನೆಮ್ಮದಿಯನ್ನೂ ಹೊಂದುವ ಜೀವ. ಅವರ ಪ್ರವಾಸೇಜ್ಞೆಯೆಂಬ ಸಂಗೀತಕ್ಕೆ ತಕ್ಕಂತೆ ಅವರ ಮಗಳ ಸಮ್ಮತಿಯ ಪಕ್ಕವಾದ್ಯವೂ ಸೇರಿದರೆ ಜಂಟಿಯಾಗಿ ಪ್ರವಾಸ ಹೊರಟರೆಂದೇ ಲೆಕ್ಕ. ಪಂಡಿತವರೇಣ್ಯರ ತಾಣವಾಗಿದ್ದ ಕಾಶಿಯಿಂದ ಬುಡಕಟ್ಟು ಜನಾಂಗದ ಅಂಡಮಾನ್ ವರೆಗೆ ಇವರು ಸಂಚರಿಸಿದ ಅನುಭವಗುಚ್ಛದ ಸುಲಲಿತ ಮಂಡಣೆಯೇ ಈ ಕೃತಿ. ಬೆನ್ನುಡಿಯಲ್ಲಿ ಅರ್ಧ ಪುಸ್ತಕ ಓದಿದಂತಾಯಿತು ಅಲ್ವಾ?

ಇಂತಹ ಬೇಸಿಗೆ ಬಿಸಿಲಿನಲ್ಲಿ ಅದ್ಯಾರು ಗುರು ಸುತ್ತಾಡುತ್ತಾರೆ ಹುಣ್ಣಿಮೆಗೊಮ್ಮೆ ಅಮಾವಾಸ್ಯೆಗೊಮ್ಮೆ ದೇವಸ್ಥಾನಕ್ಕೆ ಹೋದರೆ ದೇವಸ್ಥಾನಕ್ಕೆ ಐದು ಸುತ್ತು ಹಾಕುವಲ್ಲಿ ಎರಡೇ ಸುತ್ತು ಹಾಕಿ ಬರುವವರಿದ್ದಾರೆ ನಮ್ಮ ಜನ ಇನ್ನು ಸುತ್ತಾಟದ ಸಂಭ್ರಮ ಎಲ್ಲಿ ಬಂತು? ಆಗಲಾರದ ಮಾತು.

ಸುತ್ತಾಟದ ಸಂಭ್ರಮ ಕೃತಿಯ ಲೇಖಕಿ ಗೀತಾ ಜಿ ಹೆಗಡೆ ಬೆಂಗಳೂರು ರವರು ಹಲವಾರು ಕಡೆ ಸುತ್ತಾಡಿದ್ದಾರೆ. ಎಲ್ಲೆಲ್ಲಿ ಸುತ್ತಾಡಿದ್ದಾರೆ ಎಂದು ಹೇಳುತ್ತಾ ಹೋದರೆ ಮತ್ತೊಂದು ಪುಸ್ತಕವೇ ಹೊರ ಬರಬಹುದು. ಅದಕ್ಕಾಗಿ ತಾವೇ ಒಂದು ಸಲ ಓದಿಬಿಡಿ.

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ನಾನ್ನುಡಿ ಸತ್ಯವಾಗುತ್ತದೆ.

ಧರು ಪಿ ಕಕ್ಕಳಮೇಲಿ

ಚಾಂದಕವಟೆ

************

ಪುಸ್ತಕ ಬೇಕಾದಲ್ಲಿ ಈ ಕೆಳಗಿನ ಲಿಂಕ್ ಮೂಲಕ ತರಿಸಿಕೊಳ್ಳಬಹುದು.

22-4-2024

ಚುಟುಕುಗಳು “ನಿನ್ನಿರುವು”

ಕಣ್ಣ ಕಾಡಿಗೆಯಲ್ಲಿ

ನಿನ್ನ ಚಿತ್ರ ಬರೆದೆ

ಕಪ್ಪಾದರೂ ನೀನು

ಎಷ್ಟು ಚೆಂದ ಅಂದುಕೊಂಡೆ.

***********

ಕದ್ದು ನೋಡಲು

ಏನಿದೆ ಹೇಳು

ನಿನ್ನೊಳಗೆ ನಾನು

ನನ್ನೊಳಗೆ ನೀನು

ಅವಿತುಕೊಂಡಿರುವಾಗ.

************

ಇದ್ದಲ್ಲೇ ಇರು

ಬೇಡ ಅಂದವರಾರು

ನಿನ್ನ ನೆನಪು

ಕಚಗುಳಿ ಇಡುವಾಗ.

***********

ಅತ್ತ ದಿನಗಳ ಲೆಕ್ಕ

ಒದ್ದೆಯಾದ ದಿಂಬಿನ

ಚಿತ್ತಾರ ತಪ್ಪದೇ ಹೇಳುತ್ತದೆ

ನಿನ್ನ ಗೈರು ಹಾಜರಿಯಲ್ಲಿ.

****************

16-4-2023 9.30pm

ನನ್ನ ಮೂರನೆಯ ಕೃತಿಯ ಬಗ್ಗೆ ಲೇಖಕರ ಅಭಿಪ್ರಾಯ.

ನನ್ನ ಆತ್ಮೀಯ ಗೆಳತಿ ಮಂಗಳೂರಿನ ಲೇಖಕಿ ಶ್ರೀಮತಿ ಗೀತಾ ಕುಂದಾಪುರ ರವರು ಈಗಾಗಲೇ ಚಿರಪರಿಚಿತರು.  ತಮ್ಮ ಬರಹಗಳಿಂದಲೇ ಮನೆ ಮಾತಾಗಿರುವ ಪ್ರಬುದ್ಧ ಲೇಖಕಿ.  ಹಲವಾರು ಪತ್ರಿಕೆಗಳಲ್ಲಿ ಇವರ ಕಥೆ, ಲೇಖನ ಇತ್ಯಾದಿ ಪ್ರಕಟವಾಗುತ್ತಲೇ ಇವೆ.  ಹಾಗೆ ದೇಶ ವಿದೇಶ ಪ್ರವಾಸ ಮಾಡುವುದು, ಸುತ್ತಾಟದ ಸಂಭ್ರಮ ಬರೆದು ಪ್ರಸ್ತುತ ಪಡಿಸುವುದರಲ್ಲಿ ಎತ್ತಿದ ಕೈ ಎಂದರೂ ತಪ್ಪಾಗಲಾರದು.  

ಇವರು ನನ್ನ ಮೂರನೆಯ ಕೃತಿ “ಸುತ್ತಾಟದ ಸಂಭ್ರಮ” ಓದಿ ತಮ್ಮ ಅಭಿಪ್ರಾಯವನ್ನು ಬರೆದು ಕಳಿಸಿರುತ್ತಾರೆ.  ಧನ್ಯವಾದಗಳು ಗೆಳತಿ ಗೀತಾ 😍

************

ಕೃತಿಯ ಹೆಸರು – ಸುತ್ತಾಟದ ಸಂಭ್ರಮ (ಪ್ರವಾಸಾನುಭವ ಕಥನ)

ಲೇಖಕಿ – ಗೀತಾ ಜಿ ಹೆಗಡೆ ಕಲ್ಮನೆ

ಬೆಲೆ – 120/-

ಗೀತಾ ಹೆಗಡೆ ಅವರು ಅವರ ಕವಿತೆಗಳ ಮೂಲಕ ಪರಿಚಯವಾದರು, ಭಾವಜೀವಿ, ಅದರೆ ಸರಿಯಲ್ಲ ಎನಿಸಿದ್ದನ್ನು ಮಾತ್ರ ನಿರ್ಭೀತಿಯಿಂದ ಜಾಲತಾಣದಲ್ಲಿ ಹಂಚಿಕೊಂಡವರು. ಅವರ ʻಓ ಮನಸೇ ನೀನೇಕೆ ಹೀಗೆ?ʼ ಲೇಖನಗಳ ಸಂಕಲನ ಮತ್ತು ʻಖಾಲಿ ಹಾಳೆʼ ಕಥಾಸಂಕಲನವನ್ನೂ ಓದಿದ್ದೆ. ಇದೀಗ ಅವರ ʻಸುತ್ತಾಟದ ಸಂಭ್ರಮʼ, ಹೆಸರೇ ಹೇಳುವಂತೆ ಪ್ರವಾಸಾನುಭವ ಕಥನ ಕೈ ಸೇರಿದೆ.

ಮೊದಲಿಗೆ ಅಂಡಮಾನ, ಪೋರ್ಟ್‌ ಬ್ಲೇರ್ ಪ್ರವಾಸದ ಸಂಭ್ರವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜಗವ ಸುತ್ತವ ಹುಚ್ಚು ನನಗಿದ್ದರೂ ಅಂಡಮಾನ್‌ ಪ್ರವಾಸ ಮಾಡಿರಲಿಲ್ಲ, ಅಲ್ಲೇನೀದೆ ಕಡಲು ತಾನೇ? ನಮ್ಮೂರಿನ ಅದೇ ಬಿಳಿ ನೊರೆಯುಕ್ಕುವ ನೀಲಿ ಅಲೆಗಳ ಒಡೆಯ ನಮ್ಮೂರಲ್ಲೂ ಇದ್ದಾನೆ..ಅಲ್ಲಿಗೆ ಹೋಗಿ ನೋಡುವುದೇನು? ಮಾಡುವುದೇನು? ಎಂಬ ಅಂಬೋಣ ಕರಾವಳಿಯಲ್ಲೇ ಹುಟ್ಟಿ ಬೆಳೆದ ನನ್ನದು. ನನ್ನ ಅನಿಸಿಕೆಯನ್ನು ಸುಳ್ಳು ಮಾಡಿದರು ಗೀತಾ…

ಅಂಡಮಾನ್‌ ದ್ವೀಪ ಸಮೂಹಗಳು ಮದುಚಂದ್ರಕ್ಕೆ ಹೋಗುವವರಿಗೆ ಹೇಳಿ ಮಾಡಿಸಿದ್ದು ಅನ್ನುವ ಅನಿಸಿಕೆ ಇದ್ದರೂ ಇದು ಎಲ್ಲಾ ವಯೋಮಾನದವರು ಮೆಚ್ಚುವಂತಹದ್ದು ಎನ್ನುತ್ತಾರೆ ಗೀತಾ. ಅದೇ ಭೂಮಿ, ಅದೇ ಆಕಾಶ, ಅದೇ ನೀರಾದರೂ ನೋಡುವ ಕಣ್ಣುಗಳು ಬೇರೆಯಾದಾಗ ಅನಿಸಿಕೆಗಳೂ ಬೇರೆ, ಬೇರೆಯಾಗುತ್ತದೆ. ಇದನ್ನು ಓದಿದ ಮೇಲೆ ಕಡಲನ್ನು ನೋಡುವ ನನ್ನ ದೃಷ್ಟಿಯೇ ಬದಲಾಗಿದೆ.

ಗೀತಾ ಅವರು ಹೇಳಿ, ಕೇಳಿ ಕವಿ, ಕಡಲು, ಸೂರ್ಯಾಸ್ತ ನೋಡುತ್ತಿದ್ದಂತೆ, ಅವರ ಕವಿ ಹೃದಯ ಅರಳುತ್ತದೆ, ಅದೇ ಭಾವನೆಯನ್ನು ಅಕ್ಷರ ರೂಪಕ್ಕಿಳಿಸಿದರು. ನೀಲಿ ಸಮುದ್ರದ ರಾಶಿ ರಾಶಿ ನೀರನ್ನು ನೋಡುತ್ತಾ ನೀರ್ಜೀವ ಬೋಟಿನಲ್ಲಿ ಕೂತರೂ ಸೂಕ್ಷ್ಮ ಸಂವೇ

ದನೆಯನ್ನು ಕಂಡರು. ಇಲ್ಲಿದೆ ಕೆಲವೊಂದು ಉದಾಹರಣೆಗಳು –

..ಬನ್ನಿ ಬನ್ನಿ ಸಾಗೋಣ, ದೂರ ತೀರವ ಮುಟ್ಟೋಣ, ಸವಿಯಿರಿ ನನ್ನಂಗಳದ ತುಂಬ ಪೊಗದಸ್ತಾದ ಈ ಸೊಬಗಿನ ಸಿರಿ..

..ಆಹಾ ಆ ಭಾಸ್ಕರನ ಬಿಂಬ ಆಗಾಗ ಮರೆಯಾಗುತಿರಲು ಕಪ್ಪು ಮೋಡದ ತುಂಟಾಟಿಕೆ ನಭೋ ಮಂಡಲದ ಸೌಂದರ್ಯ ವರ್ಣನೆಗೂ ನಿಲುಕದು…ಕೈಗೆಟುಕುವಂತಿರುವ ಸೂರ್ಯ ರಶ್ಮಿಯ ಹಾವಭಾವ ನೋಡುಗರ ಕಣ್ಣು ತಣಿಸುತ್ತ ದಿಗಂತದಲ್ಲಿ ಲೀನವಾಗುವ ಗಳಿಗೆಯಂತೂ… ಎಂಬ ವಿವರಣೆಗಳಲ್ಲಿ ಇವರ ಕವಿ ಹೃದಯ ಹುಚ್ಚೆದ್ದು ಕುಣಿಯಿತು ಎಂದರೆ ತಪ್ಪಾಗದು, ಓದುಗರಿಗೂ ಲೇಖಕರ ವಿವರಣೆ ಕ್ಯಾನವಾಸಿನಲ್ಲಿ ಬಿಡಿಸಿದ ಚಿತ್ರದಂತಾಗುತ್ತದೆ.

ಸೂರ್ಯಾಸ್ತವನ್ನು ನೋಡಲು ಮುಗಿ ಬೀಳುವ ಜನರ ವಿವರಣೆ ಓದಿದಾಗ ನನಗೆ ಬಾಲಿಯ ʻತನಾಹ ಲಾಟ್‌ʼ ಎಂಬಲ್ಲಿ ಕಂಡ ಸೂರ್ಯಾಸ್ತದ ನೆನಪಾಯಿತು. ಎಷ್ಟೋ ಜನ, ಎಷ್ಟೇ ಕಾದು ಕುಳಿತರೂ ಸೂರ್ಯಾಸ್ತದ ಅಂತಿಮ ಕ್ಷಣ ನೋಡುವ ಭಾಗ್ಯಕ್ಕೆ ಮೇಘರಾಜನ ಕೃಪೆ ಇದ್ದರೆ ಮಾತ್ರ ಸಾಧ್ಯ. 

ಅಲ್ಲಲ್ಲಿ ಬರೆದಿರುವ ಉಪಮೆ ನಗು ತರಿಸದಿರದು, ಮರಳನ್ನು ಚಿರೋಟಿ ರವೆಗೆ ಹೋಲಿಸಿದ್ದಾರೆ, ಪೂರೀನೋ ಎಣ್ಣೆ ಮುಳುಕ, ಕುಂಡಿ ಕುಣಿಸುತ್ತಾ ಸಾಗುವ ನವಿಲು…

ಪೋರ್ಟ್‌ ಬ್ಲೇರ್ನ ಸೆಲ್ಯೂಲರ್‌ ಜೈಲ್‌ನ ಬಗ್ಗೆ ಮೊದಲೇ ಗೊತ್ತಿದ್ದರೂ ಈ ಮಾನವ ನಿರ್ಮಿತ ನರಕದ ವಿವರಣೆ ಓದುತ್ತಿದ್ದಂತೆ ನಾವೇ ನರಕದ ಬಾಗಿಲಲ್ಲಿ ನಿಂತಂತಾಯಿತು, ನಮ್ಮ ಸ್ವತಂತ್ರದ ಯೋದರು ಅನುಭವಿಸಿದ ಕಷ್ಟ, ಕಾರ್ಪಣ್ಯ, ನೋವಿನ ಮೇಲೆ ಬೆಳಕು ಚಲ್ಲಿದರು, ಓದಿ ಮನಸ್ಸು ಮ್ಲಾನವಾಯಿತು.

ಹ್ಯಾವ್ ಲಾಕ್‌ ದ್ವೀಪ – ಸ್ಕೂಬಾ ಡೈವಿಂಗನ ವಿವರಣೆ, ಪಚೀತಿ ಎರಡೂ ಖುಷಿ ಕೊಟ್ಟಿತು.

ರಸ್‌ ಐಲ್ಯಾಂಡ್‌ – ಸಾಕಷ್ಟು ಏಳು, ಬೀಳನ್ನು ಕಂಡ ಜಾಗ, ಒಂದು ಕಾಲದಲ್ಲಿ ಬ್ರಿಟೀಷರ ವಸಾಹತುವಾಗಿತ್ತು, ಇವರು ಇಲ್ಲಿಂದಲೇ ದರ್ಬಾರು ನಡೆಸಿದ್ದರು. ಕಡೆಗೆ ಸುನಾಮಿಯ ಹೊಡೆತಕ್ಕೆ ಸಿಕ್ಕು ಬ್ರಿಟೀಷರ ಗತ ವೈಭವದ ಕುರುಹವನ್ನೂ ನಿರ್ನಾಮಗೊಂಡ ಜಾಗ, ಈಗ ಜಿಂಕೆ, ನವಿಲಿನ ಬೀಡಾಗಿದೆ. ಯಾವುದೂ ಶಾಶ್ವತವಲ್ಲ ಎಂದು ಸಾರಿ, ಸಾರಿ ಹೇಳುತ್ತದೆ. ಅಂತಹ ಬರಡು ಭೂಮಿಯಲ್ಲೂ ಗೀತಾ ಅವರ ವಿವರಣೆ ಬರಡಾಗಿರಲಿಲ್ಲ.

ಧರ್ಮಸ್ಥಳ, ಸುಬ್ರಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳು – ಇದೇ ಊರಿನ ದಾರಿಯಲ್ಲಿ ಹಲವು ಸಲ ಸಾಗಿದ್ದರೂ ಈ ಸ್ಥಳಕ್ಕೆ ಭೆಟಿ ಕೊಟ್ಟಿದ್ದು ಕಮ್ಮಿ ಎಂದೇ ಹೇಳಬಹುದು.

ಧರ್ಮಸ್ಥಳದ ಸುತ್ತಮುತ್ತ ಇರುವ ಚಿಕ್ಕ, ಪುಟ್ಟ ದೇವಸ್ಥಾನಗಳಿಗೂ ಹೋಗಿ ಅದರ ವಿವರವನ್ನೂ ಕೊಟ್ಟಿದ್ದಾರೆ, ನಾನಿನ್ನೂ ಅಲ್ಲಿಗೆಲ್ಲಾ ಭೇಟಿ ಕೊಡದ್ದರಿಂದ ನನಗೊಂದಿಷ್ಟು ವಿವರ ಸಿಕ್ಕಂತಾಯಿತು.

ಗೀತಾ ಅವರ ಮುಂದಿನ ಹೆಜ್ಜೆ ತಮಿಳುನಾಡಿನತ್ತ. ರಾಮೇಶ್ವರ, ಧನುಷ್ಕೋಟಿ, ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನ, ಕನ್ಯಾಕುಮಾರಿ, ಮಧುರೈ ಮಿನಾಕ್ಷಿ ಹೀಗೆ ಒಂದನ್ನೂ ಬಿಡದೆ ಸುತ್ತಿದರು, 20-30 ತೀರ್ಥಗಳಲ್ಲಿ ಮುಳುಗೆದ್ದರು, ಅದನ್ನು ಬರೆದರು, ಪುಣ್ಯ ಸಂಪಾದಿಸಿದರು, ಅದನ್ನು ನಮ್ಮಂತವರೂ ಓದುವಂತೆ ಮಾಡಿ, ನಮಗೊಂದಿಷ್ಟು ಪುಣ್ಯ ಕಟ್ಟಿಕೊಳ್ಳುವಂತೆ ಮಾಡಿದರು. ಪಾಂಬನ್‌ ರೈಲ್ವೆ ಮಾರ್ಗ ಬ್ರೀಟಿಷರ ಕಾಲದ್ದು, ಅದು ಸಮುದ್ರದ ಮೇಲೆ ಹಾದು ಹೋಗುತ್ತದೆ,  ಆ ದೃಶ್ಯ ಅತ್ಯಂತ ರಮಣೀಯ, ಇದನ್ನು ಚೆನೈ ಎಕ್ಸಪ್ರೆಸ್‌ ಸಿನೆಮಾದಲ್ಲಿ ನೋಡಿದ ನೆನಪು. ಹಾಗೆಯೇ ರಾಮೇಶ್ವರದಿಂದ ಧನುಷ್ಕೋಟಿವರೆಗೂ ಹಾದಿಯೂ ಸುಂದರವೇ, ಸುಂದರ ದೃಶ್ಯಗಳ ವಿವರಣೆಯೂ ಸುಂದರವೇ..ಹಾಗೆಯೇ ತಮಿಳುನಾಡಿನ ದೇವಸ್ಥಾನಗಳ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಅತ್ಯಂತ ಸುಂದರ, ನೋಡಲು ಎರಡು ಕಣ್ಣುಗಳು ಸಾಲದು, ಅದನ್ನೂ ಸಹ ಸಾಧ್ಯವಾದಷ್ಟು ವಿವರಿಸಲು ಪ್ರಯತ್ನಿಸಿದ್ದಾರೆ. ಮಧುರೈ ಮೀನಾಕ್ಷಿಯನ್ನು ಕಂಡಾಗ ಆದ ಅನುಭೂತಿ ಓದುಗರಲ್ಲೂ ಉಂಟಾಗುವಂತೆ ಮಾಡಿದರು.

ದಕ್ಷಿಣದ ಕ್ಷೇತ್ರಗಳನ್ನು ಮುಗಿಸಿ ಉತ್ತರದ ಕಾಶಿಯತ್ತ ಹೊರಟರು, ಬಹುಶಃ ಹಿಂದುಗಳು ಜೀವನದಲ್ಲಿ ಒಂದು ಬಾರಿಯಾದರೂ ಭೇಟಿಕೊಡಲು ಇಚ್ಚಿಸುವ ದೇವಸ್ಥಾನ. ಭಂ, ಭಂ ಭೋಲೆನಾಥನೊಡನೆ ಆಘೋರಿಗಳನ್ನು ನೋಡುವ ಇಚ್ಚೆಯೂ ಇತ್ತು ಅವರಿಗೆ. ಕಾಶಿಯ ಘಾಟುಗಳು, ತ್ರಿವೇಣಿ ಸಂಗಮ, ಗಯಾವೆನ್ನುತ್ತಾ ಕಾಲ್ನಡಿಗೆಯಲ್ಲೇ ಸುತ್ತಾಟ ಮಾಡಬೇಕೆಂಬ ಹಂಬಲ, ತಮ್ಮನ್ನು ತಾವೇ ಭೋಲೇನಾಥದ ಸನ್ನಿದಿಗೆ ಒಪ್ಪಿಸುವ ಇಚ್ಛೆ.  2019ರಲ್ಲೇ ಅಯೋಧ್ಯೆಗೆ ಭೇಟಿ ಇತ್ತು ಅಲ್ಲಿರುವ ಕೆಲವೊಂದು ದೇವಾಲಯಗಳನ್ನು ನೋಡಿ ಬಂದರು, ಅದರೊಂದಿಗೆ ಸಾರಾನಾಥ್‌ ದರ್ಶನ. 

ಹತ್ತಾರು ಸ್ಥಳಕ್ಕೆ ಹೋದರೂ ಅಲ್ಲಿಗೆ ಹೋದ, ಬಂದ ದಿನಾಂಕ, ಸಮಯವನ್ನೂ ಬರೆದಿದ್ದಾರೆಂದರೆ!!! ಇವರ ನೆನಪಿನ ಶಕ್ತಿಯನ್ನು ಮೆಚ್ಚಲೇ ಬೇಕು.  ಬಸ್ಸಿನಲ್ಲಿ ಹೊರಟರೆ ಬಸ್‌ ಚಾರ್ಜ್‌, ದೂರ ಸಹ ನಮೂದಿಸಿದ್ದಾರೆಂದರೆ!!! ದೇವಸ್ಥಾನದಲ್ಲಿರುವ ಕಂಬಗಳ ಲೆಕ್ಕವನ್ನೂ ಬಿಟ್ಟಿಲ್ಲ, ಆದರೆ ಎಲ್ಲೂ ಬೋರಾಗದಂತೆ ಬರೆದಿದ್ದಾರೆ.

ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿರುವಾಗ ಮಗುವಾದರು, ಕವಿಯಾದರು, ತೀರ್ಥಕ್ಷೇತ್ರಗಳಲ್ಲಿ ಭಗವಂತನಿಗೆ ತಮ್ಮನ್ನೇ ಅರ್ಪಿಸಿಕೊಂಡರು. ಎಲ್ಲವನ್ನೂ ಅಕ್ಷರ ರೂಪಕ್ಕಿಳಿಸುವಾಗ ತಮ್ಮ ಭಾವನೆಗಳನ್ನು, ನೋಡಿದ್ದನ್ನು, ಕೇಳಿದ್ದನ್ನು, ಅಂಕಿ ಅಂಶಗಳನ್ನು ನಮ್ಮ ಮುಂದಿಟ್ಟರು, ಓದುಗನೂ ಅದರ ಸವಿಯನ್ನು ಉಣ್ಣುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ.

ಗೀತಾ ಕುಂದಾಪುರ

*************** 

ಪುಸ್ತಕ ಓದುವ ಆಸಕ್ತಿ ಇರುವವರು ಈ ಕೆಳಗಿನ ಲಿಂಕ್ ಮೂಲಕ ತಯಾರಿಸಿಕೊಳ್ಳಬಹುದು.

27-3-2024

ವಿಶ್ವ ಕವಿತೆಯ ದಿನದ ಶುಭಾಶಯಗಳು 💐

ಕವಿತೆ ಹೇಳಿತು

ನೀನು ಹೀಗೆಯೇ ಬರೆಯುತ್ತಿರು

ಒಂದು ದಿನ ನಿನ್ನನ್ನು

ಕವಯಿತ್ರಿಯಾಗಿಸುವೆ.

ನಂಬಿದ ಅವಳು

ಬರೆದೂ ಬರೆದೂ ಗುಡ್ಡೆ ಹಾಕಿದಳು

ಒಂದಲ್ಲ ಎರಡಲ್ಲ ನೂರಾರು

ಬಹು ನಿರೀಕ್ಷೆಯಲ್ಲಿ.

ಒಂದು ದಿನ ಕನಸು ಬಿತ್ತು

ತಾನೊಬ್ಬ ಕವಯಿತ್ರಿಯಾದಂತೆ

ಬೀಗಿದಳು ಅದೇ ಮಂಪರಿನಲ್ಲಿ

ಹೇಳಿಕೊಂಡು ಓಡಾಡಿದಳು.

ಕೇಳಿದವರಂದರು

ಕವನ ಪುಸ್ತಕ ಮಾಡಿಸೆಂದು

ಅಂದರೆ ನೀನು ನಿಜವಾಗಿಯೂ

ಕವಯಿತ್ರಿ ಎಂದೆನಿಸಿಕೊಳ್ಳುವೆ.

ನೋಡೇಬಿಡುವ ಹಾಗಾದರೆ

ಕವಿತೆ ಕೈಕೊಟ್ಟಿದೆ ಭ್ರಮೆಯಲ್ಲಿ

ಇನ್ನು ಪ್ರಕಾಶಕರ ಪಾದವೇ ಗತಿ

ಕವನ ಪುಸ್ತಕ ಮಾಡಿಸಬೇಕಲ್ಲ ಸ್ವಾಮಿ.

ಅವರೆಂದರು ಮಾಡುವಾ ಅದಕ್ಕೇನಂತೆ

ಆಗುತ್ತದೆ ಒಂದಿಪ್ಪತ್ತೈದು

ಐನೂರಾದರೂ ಸರಿ ಸಾವಿರವಾದರೂ ಸರಿ 

ನಿಮಗೆಷ್ಟು ಬೇಕು.

ದಂಗಾಗಿ ಓಟ ಕಿತ್ತ ಕವಿತೆ

ಅವಳ ಕೈಗೆಟುಕದಂತೆ

ಕ್ಷಣಾರ್ಧದಲ್ಲಿ ಮಂಗ ಮಾಯ

ಇರುವಳು ಅವಳಿನ್ನೂ ಅದೇ ಗುಂಗಿನಲ್ಲಿ.

ಈಗ ಹೇಳುವಳು 

ಹೊಸದರಲ್ಲಿ ಕವಿತೆ ಮುದ್ದೋ ಮುದ್ದು

ತದನಂತರದಲ್ಲಿ ಬರೆದವರಿಗೆ 

ಅದೇ ದೊಡ್ಡ ಗುದ್ದು.

21-3-2024

ಸುತ್ತಾಟದ ಸಂಭ್ರಮ

ಇದು ನನ್ನ ಮೂರನೆಯ ಕೃತಿ

ಈಗಿನ ದಿನಗಳಲ್ಲಿ ಪ್ರವಾಸ ಹೋಗುವುದು ಒಂದು ಟ್ರೆಂಡ್.  ವೀಕೆಂಡ್ ಬಂತು ಎಂದರೆ ಎಲ್ಲಿಗೆ ಹೋಗಬೇಕು ಎಂದು ಪ್ಲಾನ್ ಹಾಕುವವರೇ ಜಾಸ್ತಿ.  ದಿನ ನಿತ್ಯದ ಜಂಜಾಟದಲ್ಲಿ ಬೇಸತ್ತ ಮನ ಒಂದೆರಡು ದಿನ ಹಾಯಾಗಿ ಇರಲು ಬಯಸುವವರು ಅನೇಕರಾದರೆ ಇನ್ನು ಕೆಲವರು ಆರು ತಿಂಗಳಿಗೋ ವರ್ಷಕ್ಕೋ ಒಂದಾವರ್ತಿ ಊರೂರು, ಕ್ಷೇತ್ರ ದರ್ಶನ ಮಾಡಿ ಬರುವ ಪೂರ್ವ ತಯಾರಿ ಮಾಡಿಕೊಂಡಿರುತ್ತಾರೆ.  

ಆದರೆ ನನ್ನದು ವಿಭಿನ್ನ.  ನಮ್ಮ ಕಾಲದಲ್ಲಿ ಈಗಿನಷ್ಟು ಸ್ವಾತಂತ್ರ್ಯ, ಸವಲತ್ತು ಇರಲಿಲ್ಲ.  ಇನ್ನು ಸೋಲೋ ಟ್ರಿಪ್ ಅಂತೂ ಕನಸಿನ ಮಾತು.  ಆದರೆ ನಾನು ಕನಸು ಕಂಡಿದ್ದು ಈ ದಾರಿಯಲ್ಲಿ.  ಹಲವು ವರ್ಷಗಳವರೆಗೆ ಮನಸ್ಸಿನಲ್ಲಿ ಮಂಡಿಗೆ ತಿಂದಿದ್ದೇ ಬಂತು. ಪರಿಣಾಮ ಸೊನ್ನೆ.  

ದಿನಗಳು ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಅಲ್ವಾ?  ಮಗಳು ದೊಡ್ಡವಳಾದಂತೆ ಅವಳ ಆಕಾಂಕ್ಷೆಗಳಲ್ಲಿ ಅತ್ಯಂತ ಖುಷಿ ಕೊಡುವ ಸಂಗತಿ ದೇಶ ಸುತ್ತು ಕೋಶ ಓದು.  ಇದಕ್ಕೆ ನನ್ನ ಸಂಪೂರ್ಣ ಪ್ರೋತ್ಸಾಹ ದೊರೆತಾಗ ತನ್ನ ಖುಷಿಯಲ್ಲಿ ನನ್ನನ್ನೂ ಕೆಲವು ಬಾರಿ ಸೇರಿಸಿಕೊಂಡಿದ್ದರ ಪರಿಣಾಮವೇ ಈ ಕೃತಿ “ಸುತ್ತಾಟದ ಸಂಭ್ರಮ” (ಪ್ರವಾಸಾನುಭವದ ಕಥನ) ಹೊರ ಬರಲು ಕಾರಣವಾಯಿತು.  

ತೀರ್ಥ ಕ್ಷೇತ್ರಗಳಾದ ಕಾಶಿ, ರಾಮೇಶ್ವರ, ಅಯೋಧ್ಯೆ, ಮಧುರೈ, ಕನ್ಯಾಕುಮಾರಿ, ಧರ್ಮಸ್ಥಳ ಇತ್ಯಾದಿ ಮತ್ತು

ಅಂಡಮಾನ್ ದ್ವೀಪ ಸಮೂಹಗಳನ್ನು ಸುತ್ತಾಡಿದ ಇತಿಹಾಸ, ಸ್ಥಳ ಮಹತ್ವ, ಅನೇಕ ಅನುಭವಗಳನ್ನು ಒಳಗೊಂಡ ವಿಷಯಗಳು ಈ ಹೊತ್ತಿಗೆಯಲ್ಲಿದೆ.  

“ಈ ಕೃತಿ ಈ ಎಲ್ಲ ಸ್ಥಳಗಳಿಗೆ ಹೋಗುವಾಗ ಒಂದು ಗೈಡ್ ನಂತೆ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ” ಹೀಗಂತ ನಾನು ಹೇಳುತ್ತಿಲ್ಲ.  ಇದುವರೆಗೆ ಓದುಗರಿಂದ ಬಂದ ಪ್ರತಿಕ್ರಿಯೆ.

ಇದು ನನ್ನ ಮೂರನೆಯ ಕೃತಿ. ಈ ಕೃತಿಯನ್ನೂ ಕೂಡಾ ಎಂದಿನಂತೆ “ತೇಜು ಪಬ್ಲಿಕೇಷನ್ಸ್”ರವರೇ ಪುಸ್ತಕ ಮಾಡಿದ್ದು ವಿಶೇಷ.  ಹಾಗೂ ಇದರ ರೂವಾರಿ ಪ್ರಸಿದ್ಧ ಹಾಸ್ಯ ಸಾಹಿತಿ ಮತ್ತು ಅಂಕಣಕಾರರಾದ ಶ್ರೀ ಅಣಕು ರಾಮನಾಥ್ ರವರು ಕೂಲಂಕಷವಾಗಿ ಓದಿ ತಿದ್ದುಪಡಿ ಮಾಡಿದ್ದಲ್ಲದೇ ಪುಸ್ತಕಕ್ಕೆ ಒಂದೊಳ್ಳೆ ನಾಮಕರಣ ಮಾಡಿ ಮುನ್ನುಡಿ ಮತ್ತು ಬೆನ್ನುಡಿಯನ್ನು ಕೂಡಾ ಬರೆದಿದ್ದಾರೆ. ಸರ್ ನಿಮಗೆ ಅನಂತಾನಂತ ಧನ್ಯವಾದಗಳು. ಹಾಗೆ ಮುಖ ಪುಟ ರಚಿಸಿದ ಶ್ರೀ ಚಂದ್ರಶೇಖರ್, ಮುದ್ರಕರು ಸತ್ಯಾನಂದ ಪ್ರಿಂಟರ್ಸನ ಶ್ರೀ ಸೋಮಶೇಖರ್ ಇವರುಗಳಿಗೆ ಕೃತಜ್ಞತೆಗಳು.

ಪುಸ್ತಕ ಕೈ ಸೇರಿ ಹದಿನೈದು ದಿನಗಳ ಮೇಲಾಗಿದೆ.  ನನ್ನ ವೈಯಕ್ತಿಕ ಕಾರಣಗಳಿಂದ ಪುಸ್ತಕ ಬಗ್ಗೆ ವಿವರಣೆ ಏನೂ ಬರೆಯಲು ಸಾಧ್ಯವಾಗಿರಲಿಲ್ಲ.  ಇದರ ಮದ್ಯೆ ಈಗಾಗಲೇ ಅರವತ್ತಕ್ಕಿಂತ ಹೆಚ್ಚು ಕೃತಿಗಳು ಎಂದಿನಂತೆ ಕೊಂಡು ಓದುವ ಬಳಗದವರ ಮನೆ ಸೇರಿದೆ. ಅವರುಗಳು ಕೊಡುವ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು ☺️🙏

ಹೊಸಬರ ಪುಸ್ತಕಕ್ಕೆ ಎಲ್ಲಿದೆ ಮನ್ನಣೆ ಎಂದು ಕಂಗಾಲಾದ ಮನಸ್ಥಿತಿಯಲ್ಲಿ ಮೊದಲ ಪುಸ್ತಕ “ಮನಸೇ ನೀನೇಕೆ ಹೀಗೆ”(ಲೇಖನ ಸಂಗ್ರಹ ಪುಸ್ತಕ)ಬಂದಾಗ ಹೇಳಲಾಗದ ಕಳವಳ.  ಇದು ಮಂಜಿನಂತೆ ಸರಿದಾಗ ಸ್ವಲ್ಪ ಧೈರ್ಯ ಬಂತು.  ಎರಡನೇ ಕೃತಿ “ಖಾಲಿ ಹಾಳೆ”(ಕಥಾಸಂಕಲನ)ಕೈ ಸೇರಿದಾಗ ಮತ್ತದೇ ಆತಂಕ.  ಕೊಂಡು ಓದುವವರ ಮತ್ತದೇ ಬಳಗದ ಪ್ರೋತ್ಸಾಹ ಸಿಕ್ಕು “ಸರ್ ಪುಸ್ತಕ ಖಾಲಿ ಆಗಿದೆ. ಕಳಿಸಿ ಎರಡೂ ಕೃತಿಗಳನ್ನು ಎಂದು” ಪ್ರಕಾಶಕರಿಗೆ ಹೇಳಿದ್ದೂ ಆಯಿತು.  ಈಗ ಈ ಕೃತಿಯನ್ನು ಕೂಡಾ ಓದುಗರು ಕೈ ಬಿಟ್ಟಿಲ್ಲ.  

“ಇಳಿ ವಯಸ್ಸಿನಲ್ಲಿ ನೀನೇನು ಸಾಧಿಸಿದೆ” ಎಂದು ಕೇಳುವವರಿಗೆ ಒಂದು ಉತ್ತರ ನನ್ನೊಂದಿಗೆ ಇದೆಯಲ್ಲಾ ಎನ್ನುವುದೇ ನನಗೆ ಹೆಮ್ಮೆ.  

ತಮ್ಮೆಲ್ಲರ ಹಾರೈಕೆ, ಆಶಿರ್ವಾದ ನನಗೊಂದು ಭರವಸೆಯ ಹಾದಿ ರೂಪಿಸಿಕೊಟ್ಟಿದೆ.  ತಮಗೆಲ್ಲರಿಗೂ ಪ್ರೀತಿಯ ಅನಂತ ಧನ್ಯವಾದಗಳು 🙏

ಪುಸ್ತಕ ಓದುವ ಆಸಕ್ತಿ ಇರುವವರು ಕಮೆಂಟಿನಲ್ಲಿ ತಿಳಿಸಿ. 

ಹಾಗೂ ನನ್ನ ಮೂರೂ ಕೃತಿಗಳನ್ನು onlineನಲ್ಲೂ ತರಿಸಿಕೊಳ್ಳಬಹುದು. ಲಿಂಕ್ 👇

20-3-2024

ಜೀವನೋತ್ಸಾಹಕ್ಕೊಂದು ಗತ್ತು!

ಮಂಜಾದ ಕನ್ನಡಕದ ಗ್ಲಾಸನ್ನು

ತಿಕ್ಕಿ ತಿಕ್ಕಿ ಒರೆಸುತ್ತೇನೆ

ಅದೇ ಹಳದಿ ಕ್ಲಾತು

ಕೇಸಲ್ಲಿ ಅವಿತುಕೊಂಡಿದ್ದು

ಅದೂ ಹಳತು.

ಹಾಂ… ಈಗ ಕ್ಲೀನಾಯಿತು ಎಂದು

ನೆಟ್ಟಗೆ ಕುಳಿತು ಕಣ್ಣಿಗೆ ಏರಿಸುತ್ತೇನೆ

ಬೆಳಗಿನ ಪೇಪರ್

ಆಚೀಚೆ ಮಗುಚಿ ಹಾಕಿ

ಕೆಲಸ ಮತ್ತೆ ಮಾಡಿದರಾಯಿತೆಂದು.

ಅರೆ ಇಸ್ಕಿ?

ಮತ್ತೆ ಮಂಜು ಮಂಜು

ಏನಾಯಿತು ಇದಕ್ಕೆ

ಕಣ್ಣನ್ನೂ ಮೆಲ್ಲಗೆ ಉಜ್ಜಿಕೊಳ್ಳುತ್ತಾ

ಸ್ಪಷ್ಟವಾಗಿ ಓದಲು ಕನ್ನಡಕ ಸರಿಮಾಡಿಕೊಳ್ಳುತ್ತೇನೆ.

ಊಹೂಂ…. ಸುತಾರಾಂ ಒಪ್ಪುತ್ತಿಲ್ಲ

ಕನ್ನಡಕವೇ ಸರಿ ಇಲ್ಲ ಎಂದು ತೀರ್ಮಾನಿಸಿ

ಗಂಟೆ ಹತ್ತಾಗುವುದನ್ನೇ ಕಾದು

ಚಪ್ಪಲಿ ಮೆಟ್ಟಿ ಹೊರಡುತ್ತೇನೆ

ಚಾಳೀಸು ಅಂಗಡಿಗೆ.

ಎಂದಿನಂತೆ ಬನ್ನಿ ಬನ್ನಿ ಆಂಟಿ

ಎಂಬ ನಗು ಸೂಸುವ ಆ ಮಂಗಳೂರಿನ ಹುಡುಗ

ನನ್ನ ಕನ್ನಡಕ ಪಡೆದು ತಾನೂ ಒರೆಸುತ್ತಾನೆ

ಹೌದಿರಬಹುದೇನೋ ಗ್ಲಾಸು ಮಂಕಾಗಿದ್ದು

ನನ್ನ ಮಾತು ನಂಬಿ.

ಒಳಗಿನಿಂದ ಕರೆಯುತ್ತಾನೆ

ಬನ್ನಿ ಆಂಟಿ ನಿಮ್ಮ ಕಣ್ಣು ಚೆಕ್ ಮಾಡುವಾ

ನನ್ನ ಕಣ್ಣಿಗೆ ಎಂತಾ ಆಗಿದ್ದು ಮಣ್ಣು

ಎಂದಲವತ್ತುಕೊಂಡು ನನ್ನ ಕಣ್ಣು ಸರಿಯಾಗಿಯೇ ಇದೆ

ಎಂದು ಹೇಳುತ್ತ ಅವನು ತೋರಿಸಿದ

ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ.

ಕಣ್ಣಿಗೆ ಒಂದು ಸ್ಟೀಲ್ ಫ್ರೇಮ್ ಹಾಕಿ

ಒಂದೊಂದೇ ಬಿರಡಿ ಗ್ಲಾಸ್ ಹಾಕುತ್ತಾ

ದೂರದಲ್ಲಿ ಇರುವ ಎಬಿಸಿಡಿ ಓದಲು ಹೇಳುತ್ತಾನೆ

ಅಲ್ಲೂ ಆಗಾಗ ಮಂಜು ಈ ಗ್ಲಾಸೇ ಸರಿ ಇಲ್ಲ

ನನಗೆ ನನ್ನ ಕನ್ನಡಕವೇ ಸಾಕು ಸರಿ ಮಾಡಿ ಅಂದೆ.

ಅವನು ಆಯಿತು ಆಯಿತು ಎಂದು ಮಾಮಾ ಮಾಡಿ

ಈಗ ಓದಿ ಈಗ ಓದಿ ಎಂದು ಬಿರಡಿ ಬದಲಾಯಿಸುತ್ತಾ

ಸ್ವಲ್ಪ ಹೊತ್ತು ಹೊರಗೆ ಕೂತಿರಿ ಅಂದಿದ್ದು

ನನಗೋ ಒಳಗೊಳಗೆ ಖುಷಿಯೋ ಖುಷಿ;

ಏಕೆಂದರೆ ನನ್ನ ಕನ್ನಡಕವನ್ನೇ ಕೊಡುತ್ತೇನೆ ಅಂದಿದ್ದು.

ಕೈಯಲ್ಲಿ ಇರುವ ಮೊಬೈಲಾಗಲಿ

ಅಲ್ಲಿರುವ ಪೇಪರ್ ಆಗಲಿ ಕನ್ನಡಕವಿಲ್ಲದೇ

ಓದಲಾಗದ ನಾನು ಗದ್ದಕ್ಕೆ ಕೈಕೊಟ್ಟು ಕೂತಿದ್ದೆ

ಗ್ಲಾಸಿನ ತುಂಬಾ ತರಾವರಿ ಕನ್ನಡಕ ನೋಡುತ್ತ

ಟೇಬಲ್ ಮೇಲಿನ ಮಿರರ್ ನಲ್ಲಿ ಆಗಾಗ ಮುಖ ನೋಡಿಕೊಳ್ಳುತ್ತ.

ನೋಡಿ ಆಂಟಿ ಈಗ ಹಾಕಿಕೊಂಡು ಹೇಳಿ…

ವಾವ್! ನನ್ನ ಕನ್ನಡಕ ಸ್ಪಷ್ಟವಾಗಿ ಕಾಣುತ್ತಿದೆ

ಥ್ಯಾಂಕ್ಯೂ ಕಣೋ ಬರ್ಲಾ ಎಂದು ಹೊರಡುವಾಗ

ಅವನಂದ ಆಂಟಿ ಏಜಾಗುತ್ತಿದ್ದಂತೆ

ಹೀಗೆ ನಂಬರ್ ಬದಲಾವಣೆ ಆಗುತ್ತಿರುತ್ತದೆ

ಪೇ ಮಾಡಿ ಎಂದು ಬಿಲ್ಲು ಕೊಟ್ಟ.

‘ಏಜಾಗುತ್ತ’ಅಂದಿದ್ದು ಕೇಳಿ

ತಲೆ ಮೇಲೆ ಕೈ ಆಡಿಸುತ್ತಾ ಮತ್ತೆ ಮಿರರ್ ನೋಡಿಕೊಂಡು

ಡೈ ಮಾಡಿಕೊಂಡಿದ್ದು ಸರಿಯಾಗಿಯೇ ಇದೆ 

ಹಾಕಿದ ಸಲ್ವಾರ್ ಬುಜದ ಮೇಲಿನಿಂದ ಇಳಿಬಿಟ್ಟ ವೇಲ್

ಸರಿಯಾಗಿಯೇ ಇದೆ ಮತ್ತೆ ಏಜ್ ಅಂದನಲ್ಲಾ!

ದುಮು ದುಮು ಅಂತ ಸೆಟಗೊಂಡು ಮನೆಗೆ ಬಂದು

ಮತ್ತೆ ನಿಲುವುಗನ್ನಡಿಯಲ್ಲಿ ನಖಶಿಖಾಂತ ನೋಡಿಕೊಂಡೆ

‘ಮಂಕೆ ನೀನೇನು ಶೃಂಗಾರ ಮಾಡಿಕೊಂಡರೂ

ವಯಸ್ಸನ್ನು ಮುಚ್ಚಿಡಲು ಸಾಧ್ಯವೇನೆ?

ಆರೋಗ್ಯವೇ ತೋರಿಸುತ್ತದೆ ಇನ್ನಾದರೂ ಒಪ್ಪಿಕೊ 

ನಿನಗೆ ವಯಸ್ಸಾಯಿತೆಂದು’

ಬುದ್ಧಿ ಅಣಕಿಸುತ್ತ ಕಿಸಕ್ ಎಂದ ಈ ಮಾತು

ಕೂತಲ್ಲಿ ನಿಂತಲ್ಲಿ ಕೊರೆಯಲು ಶುರುವಾಯಿತು

ಮನಸ್ಸೆಲ್ಲಾ ಅಲ್ಲೋಲ ಕಲ್ಲೋಲ

ವಯಸ್ಸಾಯಿತೆಂದು ಒಪ್ಪಿಕೊಳ್ಳುವು ಎಷ್ಟು ಕಷ್ಟ

ಸುಳ್ಳೆಪಳ್ಳೆ ಆದರೂ ಸರಿ ನಾನಿನ್ನೂ ಯಂಗ್ ಅಂದುಕೊಳ್ಳುವುದೇ ಖುಷಿ.

ಆದರೆ ಅದೇನೋ ಹಲವರು ಸಮರ್ಥಿಸಿಕೊಳ್ಳುತ್ತಾರೆ;

‘ವಯಸ್ಸಾಗಿದ್ದು ದೇಹಕ್ಕೆ ಮನಸ್ಸಿಗೆ ಅಲ್ಲ’ 

ಈ ರೀತಿಯಲ್ಲಾದರೂ ಒಳಗೊಳಗೇ

ಖುಷಿ ಪಡಲು ಅವರುಗಳು ಆಡಿದ ಮಾತು

ವೇದ ವಾಕ್ಯವಾಗಿ ಊರೆಲ್ಲ ಹಬ್ಬಿದ್ದು.

ನಾನ್ ಬಿಡ್ತೀನಾ… 

ಯಾರು ಏನಾದರೂ ಅನ್ನಲಿ ನಾನು ನಾನೇ

ಮತ್ತೆರಡು ಹೊಸಾ ಲೇಟೆಸ್ಟ್ ಸಲ್ವಾರ್ ಖರೀದಿ ಮಾಡಿ

ಕಪ್ಪು ಹೆರಳನ್ನು ಇಳಿಬಿಟ್ಟು ಓಡಾಡುತ್ತೇನೆ

ನಿಮಗೆಷ್ಟು ವಯಸ್ಸು ಎಂದು ಕೇಳಿದವರಿಗೆ ಹೇಳುತ್ತೇನೆ

“ನಾನಿನ್ನೂ ಸೋ…..ಯಂಗ್”

28-2-2024. 10.30pm

ಲೆಕ್ಕ ಚುಕ್ತಾ

ಎಲ್ಲೋ ಇರುವ ನೀನು

ಹಾಗೆಯೇ ಸಿಕ್ಕು

ಹೀಗೆಯೇ ಹೋದರೆ ಸರಿಯೇ?

ಸೇರಿಗೆ ಸವ್ವಾ ಸೇರು ಎಂಬಂತೆ

ಅಂದು ನನಗೆ ನೀನು ಸಿಕ್ಕಿದ್ದು

ಹೀಗೆಯೇ ಎಂದು

ನೀನು ಹೇಳುವುದಾದರೆ

ಮತ್ತೆ ಮಾತಿಲ್ಲ ಬಿಡು

ಲೆಕ್ಕ ಚುಕ್ತಾ ಆಯಿತು ಎಂದು

ಚೆನ್ನಾಗಿ ಉಂಡು

ರಗ್ಗಿನ ಮೇಲೆ ರಗ್ಗು ಹೊದ್ದು

ನೆಮ್ಮದಿಯಿಂದ ಮಲಗುತ್ತೇನೆ

ಈ ಚಳಿಗೂ ಕೂಡಾ

ನಿನ್ನಂತೆ ಲೆಕ್ಕ ಹಾಕಲು ಅಟ್ಟಿಸಿ

ನನ್ನ ಗೊರಕೆ ಸದ್ದು

ನಿನ್ನ ಮನೆ ಬಾಗಿಲು ತಟ್ಟಿ ಬರಬೇಕು

ಆಗ ಅದರ ಲೆಕ್ಕವೂ ಚುಕ್ತಾ ನೋಡು

ಮತ್ತೆ ನಾನು, ನೀನು, ನಿದ್ದೆ, ಗೊರಕೆ

ಎಲ್ಲವನ್ನೂ ಒಂದಕ್ಕೊಂದು ತುಲನೆ ಮಾಡಿ

ಆಡುವ ಮಾತಿಗೂ ದೊಡ್ಡ ಫುಲ್ ಸ್ಟಾಪ್

ಕೊನೆಗೆ ಉಳಿಯುವುದು ಶೇಷ

ದೊಡ್ಡ ಸೊನ್ನೆ ಅಷ್ಟೇ.

11-2-2024  9.00pm