ಒಂದಲ್ಲಾ ಒಂದು ಊರಿನಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಇಬ್ಬರು ಹೆಂಡತಿಯರು ಇದ್ದರು. ಇಬ್ಬರಲ್ಲಿ ಒಬ್ಬಳು ತುಂಬಾ ಸುಂದರಿ. ಅವಳ ಹೆಸರೂ ಕೂಡಾ ಸುಂದರಿ. ಇನ್ನೊಬ್ಬಳ ಹೆಸರು ಕಮಲ.
ಈ ಇಬ್ಬರಲ್ಲಿ ರಾಜನಿಗೆ ಸುಂದರಿಯನ್ನು ಕಂಡರೆ ತುಂಬಾ ಪ್ರೀತಿ. ಸುಂದರವಾಗಿದ್ದಳಲ್ಲವೆ? ಸದಾ ಅವಳ ಜೊತೆಗೇ ಇರುತ್ತಿದ್ದ. ಅವಳು ಏನು ಕೇಳಿದರೂ ಇಲ್ಲವೆನ್ನುತ್ತಿರಲಿಲ್ಲ. ಅವಳು ಹೇಳಿದಂತೆ ಎಲ್ಲವೂ ನಡೆಯುತ್ತಿತ್ತು. ಇವೆಲ್ಲವುಗಳ ಪರಿಣಾಮ ಅವಳು ತುಂಬಾ ಸೊಕ್ಕಿನಿಂದ ಮೆರೆಯುತ್ತಿದ್ದಳು. ಎಲ್ಲರ ಮೇಲೆ ಅಹಂಕಾರ, ದಪ೯. ಮಾತಿನಲ್ಲಿ ಸ್ವಲ್ಪವೂ ನಯ ವಿನಯ ಗೊತ್ತಿರಲಿಲ್ಲ. ಇವಳು ರಾಜನ ಎರಡನೆಯ ಹೆಂಡತಿ ಬೇರೆ. ಅರಮನೆಯಲ್ಲಿ ಚಿಕ್ಕ ಸೊಸೆ. ರಾಜನ ಮೊದಲನೆಯ ಹೆಂಡತಿಯಾದ ಕಮಲಳ ಮೇಲೆ ಸದಾ ಏನಾದರೂ ಕೊಂಕು ಮಾತನಾಡಿ ಅವಳ ಮನಸ್ಸು ಘಾಸಿಗೊಳಿಸುವುದು ಇವಳ ದಿನ ನಿತ್ಯದ ಕೆಲಸವಾಗಿತ್ತು. ಅವಳ ವಿರುದ್ಧ ಇಲ್ಲ ಸಲ್ಲದ ಚಾಡಿ ಹೇಳಿ ರಾಜನ ಮನಸ್ಸು ಕೆಡಿಸುತ್ತಿದ್ದಳು. ಇದನ್ನು ನಂಬಿದ ರಾಜ ಮೊದಲನೇ ಹೆಂಡತಿಯನ್ನು ಹತ್ತಿರ ಸೇರಿಸುವುದನ್ನೂ ಬಿಟ್ಟ. ಇದೇ ಅವಕಾಶ ಉಪಯೋಗಿಸಿಕೊಂಡ ಸುಂದರಿ ರಾಜ ಅವಳನ್ನು ಅರಮನೆಯಿಂದಲೇ ಹೊರಗೆ ಹಾಕುವಂತೆ ಮಾಡಿದಳು.
ಪಾಪ! ಕಮಲ. ಹೆಸರಿಗೆ ತಕ್ಕಂತೆ ಸೌಮ್ಯ ಸ್ವಭಾವದವಳು. ಯಾವುದನ್ನೂ ಪ್ರತಿಭಟಿಸುವ ಶಕ್ತಿ ಅವಳಿಗಿರಲಿಲ್ಲ. ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಇದ್ದ ಅವಳು ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಳು. ಊರಿನ ಜನರೆಲ್ಲರಿಗೂ ಅವಳನ್ನು ಕಂಡರೆ ಅಪಾರ ಪ್ರೀತಿ. ಆದರೆ ರಾಜ ಅರಮನೆಯಿಂದ ಹೊರ ಹಾಕಿದಾಗ ಎಲ್ಲರಿಗೂ ತುಂಬಾ ಬೇಸರವಾಯಿತು. ಆದರೆ ರಾಜನ ಮಾತು ಯಾರೂ ಪ್ರತಿಭಟಿಸುವಂತಿರಲಿಲ್ಲ. ರಾಜನಲ್ಲವೆ? ಭಯ ಎಲ್ಲರಿಗೂ.
ರಾಜನಿಂದ ಹೊರಗಟ್ಟಲ್ಪಟ್ಟ ಕಮಲ ದಿಕ್ಕು ತೋಚದಂತಾಗಿ ಇನ್ನೆಲ್ಲಿ ನನಗೆ ಬದುಕು? ದೂರ ಬಹುದೂರ ಹೊರಟು ಹೋಗೋಣವೆಂದು ನಿಧ೯ರಿಸಿ ಹೋಗುತ್ತಿದ್ದಾಳೆ ದಿಕ್ಕು ದೆಸೆಯಿಲ್ಲದೆ ಅಳುತ್ತ. ಹೀಗೆ ಹೋಗುತ್ತಿರುವಾಗ ಒಬ್ಬ ದಾಸಯ್ಯ ದಾರಿಯಲ್ಲಿ ಸಿಗುತ್ತಾನೆ. ಇವಳು ಅಳುತ್ತಿರುವುದನ್ನು ಕಂಡು “ತಂಗಿ ಯಾಕವ್ವ ಅಳ್ತಿದ್ದೀಯಾ? ಏನಾಯಿತು? ನನ್ನ ಹತ್ತಿರ ಹೇಳು. ನನ್ನ ಕೈಲಾದ ಸಹಾಯ ಮಾಡುತ್ತೇನೆ.” ಎಂದಾಗ ಇವಳಿಗೆ ದುಃಖ ಒತ್ತರಿಸಿ ಬಂದು ಇರುವ ವಿಷಯ ಹೇಳುತ್ತಾಳೆ. “ಅಷ್ಟೇನಾ? ಯೋಚಿಸಬೇಡ. ತಂಗಿ ನಿನ್ನ ಗುಣವೆ ನಿನ್ನನ್ನು ಕಾಪಾಡುವುದು. ನೀನು ನಾನು ಹೇಳಿದಂತೆ ಮಾಡ್ತೀಯಾ?” “ಆಯಿತು ಸ್ವಾಮಿ, ಅದೇನು ಹೇಳಿ.” “ನೋಡು ಇಲ್ಲಿಂದ ನೇರವಾಗಿ ಹತ್ತು ಗಜ ದೂರದಲ್ಲಿ ಒಂದು ದೇವಸ್ಥಾನವಿದೆ. ಅಲ್ಲಿ ಪೂಜಾರಿಯನ್ನು ಕಂಡು ಅವರು ಹೇಳಿದಂತೆ ನಡೆದುಕೊ. ತಪ್ಪಬೇಡ” ಎಂದು ಹೇಳಿ ದಾಸಯ್ಯ ಹೊರಟು ಹೋದ.
ಕಮಲ ದಾಸಯ್ಯ ಹೇಳಿದಂತೆ ದೇವಸ್ಥಾನಕ್ಕೆ ಹೋಗುತ್ತಾಳೆ. ಅಲ್ಲಿಯ ಪೂಜಾರಿ ಇವಳನ್ನು ಕಂಡು ” ಬಾರವ್ವ ಇಲ್ಲಿ. ಈಗ ನಾನು ಕೊಡುವ ಈ ಲಿಂಬೆ ಹಣ್ಣು ತಲೆಗೆ ಹಚ್ಚಿಕೊಂಡು ಕಲ್ಯಾಣಿಯಲ್ಲಿ ಮೂರು ಸಾರಿ ಮುಳುಗೇಳಬೇಕು. ನಂತರ ಈ ಮಡಿಯುಟ್ಟು ಬಂದು ದೇವರಿಗೆ ಪೂಜೆ ಸಲ್ಲಿಸು” ಎಂದು ಹೇಳುತ್ತಾರೆ.
ಅದರಂತೆ ಕಮಲ ಕಲ್ಯಾಣಿಯಲ್ಲಿ ಮೂರು ಸಲ ಮುಳುಗೇಳುತ್ತಾಳೆ. ಅದೇನಾಶ್ಚಾಯ೯! ತಲೆಯಲ್ಲಿದ್ದ ಒಂದೇ ಒಂದು ಕೂದಲಿನ ಬದಲಾಗಿ ನೀಳವಾದ ಕೇಶ ರಾಶಿ ತಲೆಯಲ್ಲಿ ಆವರಿಸಿತು. ದೇಹವೆಲ್ಲ ಸುಂದರವಾಯಿತು. ಮೈಯ್ಯಲ್ಲಿ ನವ ಚೇತನ ಉಕ್ಕೇರಿತು. ಖುಷಿಯಿಂದ ಮೇಲೆ ಬಂದು ಮಡಿಯುಟ್ಟು ಪೂಜಾರಿ ಹೇಳಿದಂತೆ ದೇವರಿಗೆ ಪೂಜೆ ಸಲ್ಲಿಸುತ್ತಾಳೆ.
ಮತ್ತೆ ಅರಮನೆಗೆ ಮರಳುವಾಸೆ ಮನದಲ್ಲಿ. ದಾರಿಯಲ್ಲಿ ಸಾಗುತ್ತಿರಲು ಅಡಿಕೆ ತೆಂಗು ಬಾಳೆಯ ಗಿಡಗಳು “ಅಕ್ಕಾ ಅಕ್ಕಾ ನಮಗೆ ಸ್ವಲ್ಪ ನೀರು ಹಾಕು” ಎಂದಾಗ ಅವುಗಳಿಗೆಲ್ಲ ನೀರುಣಿಸಿ ಅವುಗಳು ಕೊಟ್ಟ ಹಣ್ಣು ಹೊಟ್ಟೆ ತುಂಬಾ ತಿಂದು ಮುಂದೆ ಸಾಗುತ್ತಾಳೆ. ಮತ್ತೆ ಹೂಗಳ ಗಿಡಗಳು ಇದೇ ಮಾತು ಹೇಳಿದವು. ಅವುಗಳಿಗೂ ನೀರೆರೆದಾಗ ಹೂವರಳಿಸಿ ಅಕ್ಕಾ ಮುಡಿದುಕೊ ಬಾ ಎಂದು ಅವಳ ಹೆರಳೇರಿ ತಲೆ ತುಂಬ ಹೂಗಳು ನಳನಳಿಸುತ್ತವೆ. ಹಾಗೆ ಮುಂದೆ ಸಾಗಿದಾಗ ಒಬ್ಬ ಮಾಂತ್ರಿಕ ಎದುರಾಗುತ್ತಾನೆ. “ತಂಗಿ ಇಷ್ಟೆಲ್ಲಾ ಶೃಂಗಾರ ಮಾಡಿಕೊಂಡಿದ್ದೀಯಾ. ಒಡವೆನೆ ಹಾಕಿಲ್ಲ. ಬಾ ನನ್ನ ಹತ್ತಿರ ಎರಡು ಪೆಟ್ಟಿಗೆ ಇದೆ. ಇದರಲ್ಲಿ ನಿನಗೆ ಚೇಳಿನ ಪೆಟ್ಟಿಗೆ ಬೇಕೊ ಬಂಗಾರದ ಪೆಟ್ಟಿಗೆ ಬೇಕೊ ” ಕೇಳುತ್ತಾನೆ. ಆಗ ಅವಳಿಗೆ ಮನದ ಮೂಲೆಯಲ್ಲಿ ರಾಜ ಹೊರಗಾಕಿದ್ದಾನೆ ಅನ್ನುವ ನೋವಿತ್ತಲ್ಲ. ಅದಕ್ಕೆ ಅವಳು ಈ ಬಂಗಾರ ತಗೊಂಡು ಏನು ಮಾಡಲಿ! “ಚೇಳಿನ ಪೆಟ್ಟಿಗೇನೆ ಕೊಡಿ” ಎಂದು ಹೇಳುತ್ತಾಳೆ. ಮಾಂತ್ರಿಕ ಅವಳು ಕೇಳಿದ ಪೆಟ್ಟಿಗೆ ಕೊಟ್ಟು ಮುಂದೆ ಸಾಗುತ್ತಾನೆ.
ಕಮಲಳಿಗೆ ಯಾಕೊ ಇದುವರೆಗೆ ಇಲ್ಲದ ಆತಂಕ, ಬೇಸರ, ನಿರಾಸೆ. ನಾನು ಅರಮನೆಗೆ ಹೋದರೆ ರಾಜ ಮತ್ತೆ ನನ್ನನ್ನು ಸ್ವೀಕರಿಸುತ್ತಾನೆ ಅಂತ ಯಾವ ಗ್ಯಾರಂಟಿ. ಪೆಟ್ಟಿಗೆಯಲ್ಲಿನ ಚೇಳಿಂದ ಕಚ್ಚಿಸಿಕೊಂಡು ಸಾಯೋಣವೆಂದು ಪೆಟ್ಟಿಗೆ ತೆಗೆದರೆ ಅದರ ತುಂಬಾ ಬಂಗಾರ, ವಜ್ರದ ಒಡವೆಗಳು. ಮತ್ತೆ ಖುಷಿಯಿಂದ ಎಲ್ಲ ಧರಿಸಿಕೊಂಡು ನೋಡುತ್ತಾಳೆ ಅದೇ ಸಾದು ಎದುರಿಗೆ ನಿಂತಿದ್ದಾರೆ. ಅವರಿಗೆ ನಮಸ್ಕಾರ ಮಾಡುತ್ತಾಳೆ. “ತಂಗಿ ನೀನು ಧೈರ್ಯವಾಗಿ ಅರಮನೆಗೆ ಹೋಗು. ಒಳ್ಳೆಯದಾಗಲಿ “ಎಂದು ಹಾರೈಸಿ ಹೋಗುತ್ತಾರೆ. ಅವಳು ಜಗಮಗಿಸುವ ನವ ತರುಣಿಯ ಸೌಂದರ್ಯ ಹೊತ್ತು ಅರಮನೆ ಪ್ರವೇಶಿಸಿದಾಗ ರಾಜ ಆಶ್ಚರ್ಯ ಚಕಿತನಾಗಿ ಅವಳನ್ನು ಭರಮಾಡಿಕೊಳ್ಳುತ್ತಾನೆ.
ಆದರೆ ಸುಂದರಿಗೆ ಅಸೂಯೆ ಶುರುವಾಗುತ್ತದೆ. ಅವಳು ಇವಳಿಂದ ಉಪಾಯವಾಗಿ ಎಲ್ಲ ವಿಷಯ ತಿಳಿದು ಇನ್ನೂ ಹೆಚ್ಚಿನ ಸೌಂದರ್ಯವತಿಯಾಗಿ ರಾಜನನ್ನು ಮೆಚ್ಚಿಸಬೇಕೆಂದು ಇವಳು ಸಾಗಿದ ದಾರಿಯಲ್ಲೇ ಹೋಗುತ್ತಾಳೆ. ಅದೇ ದಾಸಯ್ಯ, ಅದೇ ಪೂಜಾರಿ, ಅದೆ ಗಿಡ ಮರಗಳು, ಅದೇ ಮಾಂತ್ರಿಕ ಎಲ್ಲರೂ ಎದುರಾಗುತ್ತಾರೆ. ಎಲ್ಲರ ಹತ್ತಿರವೂ ವ್ಯತಿರಿಕ್ತವಾಗಿ ಉದ್ಧಟತನದಿಂದ ಅಹಂಕಾರದಿಂದ ನಡೆದುಕೊಳ್ಳುತ್ತಾಳೆ. ಇದರಿಂದಾಗಿ ಇರುವ ಸೌಂದರ್ಯ ಹೋಗಿ ಕುರೂಪಿಯಾಗುತ್ತಾಳೆ. ಮಾಂತ್ರಿಕ ಕೊಟ್ಟ ಪೆಟ್ಟಿಗೆ ಬಂಗಾರದ್ದೆಂದು ನಂಬಿ ತೆರೆದಾಗ ಅದರಲ್ಲಿಯ ಚೇಳು ಕಡಿತದಿಂದ ಅಸು ನೀಗುತ್ತಾಳೆ.
ಇತ್ತ ಕಮಲ ರಾಜನೊಂದಿಗೆ ಸುಖ ಸಂತೋಷದಿಂದ ಜೀವನ ಸಾಗಿಸುತ್ತಾಳೆ. ಹಾಳಾದ ರಾಜನ ಮನಸ್ಸು ತಿದ್ದಿ ತೀಡಿ ಉತ್ತಮವಾಗಿ ಸಂಸಾರ ನಡೆಸುತ್ತಾಳೆ. ಪ್ರಜೆಗಳ ಪ್ರೀತಿಗೆ ಮತ್ತೆ ಪಾತ್ರನಾದ ರಾಜ ಒಳ್ಳೆಯ ರಾಜನೆಂದು ಹೊಗಳಿಸಿಕೊಳ್ಳುತ್ತಾನೆ.
ಅಂದರೆ ಮನುಷ್ಯನಿಗೆ ರೂಪ ಮುಖ್ಯ ಅಲ್ಲ,; ಮನಸ್ಸು ಸುಂದರವಾಗಿರಬೇಕು. ಅವನ ಗುಣವೆ ಅವನನ್ನು ರಕ್ಷಿಸುತ್ತದೆ. ಆದುದರಿಂದ ಮಕ್ಕಳೆ ಗುಣವಂತರಾಗಿ ಬಾಳಿ.
13-11-2016. 8.29pm