ಎಷ್ಟು ಸುಲಭ!

ಹತ್ಯೆ ಎಂದರೆ 

ತರಕಾರಿ ಕತ್ತರಿಸುವುದಕ್ಕಿಂತ ಸುಲಭ ಬಿಡಿ 

ಮಾರ್ಕೆಟ್ಟಿಗೆ ಹೋಗಿ 

ಚೌಕಾಸಿ ಮಾಡಿ ತರಕಾರಿ ಆಯ್ದು 

ಹೊತ್ತು ತರಬೇಕಿಲ್ಲ 

ತೊಟ್ಟು ತೆಗೆದು ನಾರು ಬಿಡಿಸಿ 

ತೊಳೆಯಬೇಕಿಲ್ಲ

ಜಸ್ಟ್ ಕತ್ತರಿಸಿದರೆ ಸಾಕು.

ಚೆಲ್ಲಾಪಿಲ್ಲಿಯಾಗಿ ಬಿದ್ದ 

ಕಸ ಸಿಪ್ಪೆ ಬಳಿದು ತೆಗೆಯಬೇಕಿಲ್ಲ 

ಬಿದ್ದಲ್ಲೇ ಬಿದ್ದ ರುಂಡ ಮುಂಡ 

ಕಾಲು ಕೈ ರಕ್ತದಲ್ಲಿ ಬಿದ್ದು ಒದ್ದಾಡಿದರೂ 

ತಿರುಗಿಯೂ ನೋಡಬೇಕಿಲ್ಲ.

ಆದರೆ ಒಂದೇ ಒಂದು ವ್ಯತ್ಯಾಸ 

ದೊಡ್ಡ ಹತಿಯಾರ ಇದ್ದರೆ ಸಾಕು 

ಅಡಗಿಸಿಕೊಂಡ ಕೈ ಸರಕ್ಕನೆ ತೆಗೆದು 

ಏಕ್ ಮಾರ್ ದೋ ತುಕಡಾ 

ಕೆಲಸ ಮಟಾಷ್……..

ಎಷ್ಟು ಸುಲಭ ನೋಡಿ 

ಮನಸ್ಸು ದೇಹ ಎಲ್ಲ ದ್ವೇಷ, ಅಸೂಯೆಯಿಂದ 

ತುಂಬಿ ಕೆಂಡಾಮಂಡಲವಾಗಿ ರೋಶ ಉಕ್ಕಿದಾಗ 

ತಾನೇ ಮಾಡಬೇಕೆಂದೆನೂ ಇಲ್ಲ 

ವಹಿಸಿದರೆ ಆಯಿತು 

ಕಾಂಚಾಣ ಮಾತನಾಡುತ್ತದೆ

ಇನ್ನೇನು?

ಈ ಬಿಸಿಲು ಬೇಗೆ ಸೆಕೆಯಲ್ಲಿ 

ತರಕಾರಿ ತಂದು, ತೊಳೆದು, ಹೆಚ್ಚಿ 

ಬೇಯಿಸಿ ಅಡಿಗೆ ಮಾಡಿ ಬಡಿಸಿ 

ಪಾತ್ರೆ ತೊಳೆದು…..

ಅಬ್ಬಬ್ಬಾ ಎಷ್ಟೊಂದು ಕೆಲಸ

ಕೊನೆಗೆ ಕಾಸು ಕೊಡುವವರೂ ಇಲ್ಲ 

ಪ್ರಚಾರ, ಪಬ್ಲಿಸಿಟಿಯಂತೂ ಇಲ್ಲವೇ ಇಲ್ಲ.

ಹತ್ಯೆ ಎಂದರೆ ಬಹಳ ಬಹಳ

ಸುಲಭ ಬಿಡಿ ಈಗ

ಸಿಕ್ಕಾಕಿಕೊಂಡರೆ ಜೈಲಿನಲ್ಲಿ ರಾಜೋಪಚಾರ

ಪಾರ್ಟಿ ಪ್ರೆಸ್ಟೀಜ್ ಮಾತ್ರ ನಿಗೂಢ 

ನಾನವನಲ್ಲಾ ನಾನವನಲ್ಲಾ ನಾನವನಲ್ಲಾ 

ಇಷ್ಟೇ!

22-4-2024  9.30pm

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮ ಟಿಪ್ಪಣಿ ಬರೆಯಿರಿ